ಬೀದರ್: ‘ಪರಿಸರದಿಂದ ಮಾತ್ರ ಜೀವ ಸಂಕುಲ ಬದುಕಿ ಉಳಿಯಲು ಸಾಧ್ಯ. ಇಂದು ಹಲವು ಕಾರಣಗಳಿಂದಾಗಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು’ ಎಂದು ಬೆಂಗಳೂರಿನ ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಮನವಿ ಮಾಡಿದರು.
ಇಲ್ಲಿಯ ಬಸವಗಿರಿಯಲ್ಲಿ ವಚನ ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ಮಹಿಳಾ ಜಾಗೃತಿ ಸಮಾವೇಶದಲ್ಲಿ ‘ಪರಿಸರ ಪ್ರಜ್ಞೆ ಮತ್ತು ಮಹಿಳೆ’ ಕುರಿತು ಉಪನ್ಯಾಸ ನೀಡಿದರು.
‘ಪ್ಲಾಸ್ಟಿಕ್ ಬಳಕೆ ಸಮಾಜಕ್ಕೆ ಮಾರಕವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಕೈಜೋಡಿಸಬೇಕು. ಈ ಕಾರ್ಯ ಅಡುಗೆ ಮನೆಯಿಂದ ಪ್ರಾರಂಭವಾಗಬೇಕು. ತರಕಾರಿ ಸಿಪ್ಪೆಯಿಂದ ಗೊಬ್ಬರ, ಅಡುಗೆಯ ತ್ಯಾಜ್ಯದಿಂದ ಅಡುಗೆ ಅನಿಲ ತಯಾರಿಸಬೇಕು’ ಎಂದು ತಿಳಿಸಿದರು.
ಪುಣೆಯ ಭೂಮಾತಾ ಬ್ರಿಗೇಡ್ನ ತೃಪ್ತಿ ದೇಸಾಯಿ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಮಹಿಳೆ ಕಷ್ಟಕ್ಕೆ ಹೆದರಿ ಅಳುವವಳ್ಳ, ಬದಲಾಗಿ ಧೈರ್ಯದಿಂದ ಹೋರಾಡುವ ಮನೋಭಾವ ಬೆಳೆಸಿಕೊಂಡಿದ್ದಾಳೆ’ ಎಂದರು.
‘12 ನೇ ಶತಮಾನದಲ್ಲಿ ಬಸವಣ್ಣನವರು ಮಹಿಳಾ ಸಂಕುಲಕ್ಕೆ ಸಮಾನತೆ, ಸ್ವಾತಂತ್ರ್ಯ ಕಲ್ಪಿಸಿಕೊಟ್ಟರು. ಅವರ ವಿಚಾರಗಳನ್ನು ಒಪ್ಪಿಕೊಳ್ಳದವರು ವಚನಗಳನ್ನು ಸುಡಲು ಮುಂದಾದರು. ಅಂತಹ ಮನಸ್ಥಿತಿ ಹೊಂದಿದ ಪುರುಷಲೋಕ ಇಂದಿಗೂ ಸ್ತ್ರೀ ಶೋಷಣೆ ಮಾಡುತ್ತಿದ್ದಾರೆ. ಮಹಿಳೆಯರು ಶೋಷಣೆಯನ್ನು ಸಹಿಸಿಕೊಳ್ಳದೆ ಪ್ರತಿಭಟಿಸಬೇಕು’ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು. ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ‘ಮೂಢನಂಬಿಕೆ ಮತ್ತು ಮಹಿಳೆ’ ಕುರಿತು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ‘ದೇವನೆಡೆಗೆ’ ಗ್ರಂಥ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ ‘ಅಕ್ಕನ ವಚನ ಪರುಷ’ ಬಿಡುಗಡೆ ಮಾಡಿದರು. ಅಕ್ಕಅನ್ನಪೂರ್ಣ ಸಾನ್ನಿಧ್ಯ ವಹಿಸಿದ್ದರು.
ಅಕ್ಕ ಗಂಗಾಂಬಿಕೆ ನೇತೃತ್ವ ವಹಿಸಿದರು. ಮಹಿಳಾ ಆಯೋಗದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಅಧ್ಯಕ್ಷತೆ ವಹಿಸಿದರು.
ಸೋಲಾಪುರ ಬಸವ ಕೇಂದ್ರದ ಸಿಂಧುತಾಯಿ ಕಾಡಾದಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ
ಮುನೋಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.