ಬೀದರ್: ದೇಶದಲ್ಲಿ ಧರ್ಮದ ಹೆಸರಲ್ಲಿ ವಿಭಜನೆ ನಡೆದಿದೆ. ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿರುವ ಕಾರಣ ಗುಂಪು ಹಲ್ಲೆ ಹಾಗೂ ಹತ್ಯೆ ನಡೆಯುತ್ತಿವೆ. ರಾಷ್ಟ್ರದಲ್ಲಿ ಶಾಂತಿ, ಸೌಹಾರ್ದದ ವಾತಾವರಣ ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ವಿವಿಧ ಸಂಘಟನೆಗಳು ನಗರದಲ್ಲಿ ಶನಿವಾರ ಮೆರವಣಿಗೆ ನಡೆಸಿದವು.
ನಾಲ್ಕು ವರ್ಷಗಳ ಅವಧಿಯಲ್ಲಿ ಗುಂಪು ಹಲ್ಲೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವಕ್ಕೆ ಧಕ್ಕೆ ಬಂದಿದೆ. ಮಾನವ ಹಕ್ಕುಗಳ ಸಂರಕ್ಷಣೆಯ ವಿಷಯದಲ್ಲಿಯೂ ಭಾರತ ಕೆಳ ಮಟ್ಟಕ್ಕೆ ಕುಸಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸತ್ತಿನಲ್ಲಿ ಅನೇಕ ಸಂಸದರು ಈ ಕುರಿತು ಪ್ರಸ್ತಾಪ ಮಾಡಿದ್ದಾರೆ. ವಿಶ್ವ ಸಂಸ್ಥೆಯಲ್ಲಿ ಚರ್ಚೆ ನಡೆದಿದೆ. ದೇಶದ ಘನತೆಯನ್ನು ಕಾಯ್ದುಕೊಳ್ಳಲು ಹಾಗೂ ಮಾನವೀಯ ಮೌಲ್ಯಗಳ ಪ್ರತಿಷ್ಠಾಪನೆಗೆ ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸಲು ರಾಷ್ಟ್ರಪತಿ ಅವರು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಸದ್ಭಾವನಾ ಮಂಚ್ನ ಗುರುನಾಥ ಗಡ್ಡೆ, ರಾಬ್ತೆ ಮಿಲ್ಲತ್ನ ಮೌಲಾನಾ ಅಬ್ದುಲ್ ವಾಹೀದ್ ಕಾಸ್ಮಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಬಾಬುರಾವ್ ಹೊನ್ನಾ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮುಬಾಶಿರ್ ಶಿಂಧೆ, ಜಮಾ ಅತೆ ಇಸ್ಲಾಮಿ ಹಿಂದ್ನ ರಫೀಕ್ ಅಹ್ಮದ್, ಮುಹಮ್ಮದ್ ನಿಝಾಮುದ್ದೀನ್, ಮುಹಮ್ಮದ್ ಮೌಅಝ್ಝಮ್, ಮಹಮ್ಮದ್ ಅಕ್ರಮ್ ಅಲಿ, ಮುಸ್ಲಿಂ ಹ್ಯೂಮನ್ ರೈಟ್ಸ್ನ ಅಬ್ದುಲ್ ವಹಿದ್ ಲಖನ್, ಮೆಥೋಡಿಸ್ಟ್ ಚರ್ಚ್ನ ರೆವರೆಂಡ್ ಎಂ.ಪಿ. ಜೈಪೌಲ್, ಸೈಯದ್ ಹಾಮೇದ್ ಮೊಹಿಯೊದ್ದೀನ್ ಖಾದ್ರಿ, ಬೀದರ್ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ, ಕಂಟೆಪ್ಪ ಗುಮ್ಮೆ, ಸುಭಾಷ ವರ್ಮಾ, ಖುರೇಷ್ ಸಮುದಾಯದ ನಬಿ ಖುರೇಷಿ, ಗುರುದ್ವಾರ ಪ್ರಬಂಧಕ ಕಮಿಟಿಯ ಸರ್ದಾರ್ ದರ್ಬಾರಾ ಸಿಂಗ್, ಯಾರಾನೆ ಅದಬ್ನ ಯುಸೂಫ್ ಅಬ್ದುರ್ ರಹೀಮ್ ಬಿದ್ರಿ, ಈದ್ಗಾ ಕಮಿಟಿಯ ಅಹಮ್ಮದ್ ಸೇಠ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.