ADVERTISEMENT

ಸಂಭ್ರಮದ ಮೆರವಣಿಗೆ, ಕಲಾವಿದರ ಆಕರ್ಷಕ ನೃತ್ಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 20:15 IST
Last Updated 15 ನವೆಂಬರ್ 2018, 20:15 IST
ಸಹಕಾರ ಸಪ್ತಾಹ ಅಂಗವಾಗಿ ಬೀದರ್ ನಗರದಲ್ಲಿ ಗುರುವಾರ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡ ವಿವಿಧ ಕಲಾ ತಂಡಗಳು
ಸಹಕಾರ ಸಪ್ತಾಹ ಅಂಗವಾಗಿ ಬೀದರ್ ನಗರದಲ್ಲಿ ಗುರುವಾರ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡ ವಿವಿಧ ಕಲಾ ತಂಡಗಳು   

ಬೀದರ್‌: ಸಹಕಾರ ಸಪ್ತಾಹ ಅಂಗವಾಗಿ ಗುರುವಾರ ನಗರದಲ್ಲಿ ಸಂಭ್ರಮದ ಮೆರವಣಿಗೆ ನಡೆಯಿತು.

ಬರಿದ್‌ಶಾಹಿ ಉದ್ಯಾನ ವನದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹಸಿರು ಧ್ವಜ ತೋರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಅಲಂಕೃತ ಎತ್ತಿನ ಬಂಡಿಗಳು ಮತ್ತು ವಿವಿಧ ಕಲಾ ತಂಡಗಳ ನೃತ್ಯ ಮೆರವಣಿಗೆಯ ಸೊಬಗು ಹೆಚ್ಚಿಸಿತು. ಸುಮಾರು 1 ಕಿ.ಮೀ. ದೂರದ ವರೆಗಿನ ಮೆರವಣಿಗೆ ನೋಡಲು ಜನ ಮುಗಿಬಿದ್ದರು.

ADVERTISEMENT

ಕಲಬುರ್ಗಿ, ಶಹಾಪುರ, ಅಫ್ಜಲಪುರ, ಸಿಂಧನೂರ ಸೇರಿದಂತೆ ವಿವಿಧೆಡೆಯಿಂದ ಬಂದ ಡೊಳ್ಳು ಕುಣಿತ, ಚರ್ಮ ವಾದ್ಯ, ಹೆಜ್ಜೆ ಮೇಳ ತಂಡದ ಕಲಾವಿದರ ವರ್ಣರಂಜಿತ ನೃತ್ಯ ನೋಡುಗರ ಕಣ್ಮನ ಸೆಳೆಯಿತು. ಲಂಬಾಣಿ ಮಹಿಳೆಯರ ಸಾಂಪ್ರದಾಯಿಕ ನೃತ್ಯ ಆಕರ್ಷಕವಾಗಿತ್ತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸ್ವಸಹಾಯ ಗುಂಪುಗಳ ಮಹಿಳೆಯರು ಮೆರವಣಿಗೆ ಉದ್ದಕ್ಕೂ ಸಹಕಾರ ಸಪ್ತಾಹಕ್ಕೆ ಜಯವಾಗಲಿ ಎಂಬ ಘೋಷಣೆ ಮೊಳಗಿಸಿದರು.

ಬರಿದ್‌ಶಾಹಿ ಉದ್ಯಾನದಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ, ಮಡಿವಾಳ ಮಾಚಿದೇವ ವೃತ್ತದ ಮೂಲಕ ಸಮಾವೇಶ ಸ್ಥಳವಾದ ನೆಹರೂ ಕ್ರೀಡಾಂಗಣಕ್ಕೆ ತಲುಪಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಡಾ. ಪ್ರಕಾಶ ಪಾಟೀಲ, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾದೇವಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.