ಬೀದರ್: ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ವಶಕ್ಕೆ ತೆಗೆದುಕೊಂಡ ಆರೋಪಿಯೊಬ್ಬ ಅಬಕಾರಿ ಪಿಎಸ್ಐ ಮೇಲೆ ಹಲ್ಲೆ ನಡೆಸಿದ ಘಟನೆ ಇಲ್ಲಿಯ ಹೊಸ ಆರ್ಟಿಒ ಕಚೇರಿ ಸಮೀಪದ ಶ್ರೀ ಸಿದ್ಧೇಶ್ವರ ಟಿಫಿನ್ ಸೆಂಟರ್ ಬಳಿ ನಡೆದಿದೆ.
‘ಸದ್ಯ ಪ್ರತಾಪನಗರದಲ್ಲಿ ವಾಸವಾಗಿರುವ ಧನ್ನೂರ ಗ್ರಾಮದ ಆರೋಪಿ ಸಂಜುಕುಮಾರ ಕಲ್ಲಪ್ಪ ಕುಂಬಾರ ಏಕಾಏಕಿ ಕಟ್ಟಿಗೆ ಪ್ಲೈವುಡ್ನಿಂದ ನನ್ನ ತಲೆಗೆ ಹೊಡೆದಿದ್ದಾನೆ. ಇನ್ನೊಬ್ಬ ಆರೋಪಿ ನಂದಕುಮಾರ ಕಲ್ಲಪ್ಪ ಕುಂಬಾರ ಕಲ್ಲು ಎಸೆದು ಜೀಪ್ ಗಾಜು ಜಖಂಗೊಳಿಸಿದ್ದಾನೆ’ ಎಂದು ಅಬಕಾರಿ ಉಪ ನಿರೀಕ್ಷಕ ಕೌಸಲ್ಯ ಅವರು ನ್ಯೂಟೌನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
‘ವಶಕ್ಕೆ ತೆಗೆದುಕೊಂಡ ಆರೋಪಿಗಳು, ಮದ್ಯ ಹಾಗೂ ಜಖಂಗೊಂಡ ಜೀಪ್ನ್ನು ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಸರ್ಕಾರಿ ಕೆಲಸಕ್ಕೆ ತಡೆ ಉಂಟು ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.
‘ಶ್ರೀ ಸಿದ್ಧೇಶ್ವರ ಟಿಫಿನ್ ಸೆಂಟರ್ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎನ್ನುವ ದೂರಿನ ಮೇರೆಗೆ ದಾಳಿ ನಡೆಸಲಾಗಿತ್ತು. ಟಿಫಿನ್ ಸೆಂಟರ್ನಲ್ಲಿ 90 ಎಂ.ಎಲ್ನ ಒರಿಜಿನಲ್ ಚಾಯಿಸ್ ವಿಸ್ಕಿಯ 23 ಟೆಟ್ರಾ ಪಾಕೇಟ್ಗಳು, 180 ಎಂ.ಎಲ್ನ ಐ.ಬಿ ವಿಸ್ಕಿಯ ಮೂರು ಬಾಟಲಿ ಹಾಗೂ 650 ಎಂ.ಎಲ್ನ ಬೀಯರ್ನ 2 ಬಾಟಲಿಗಳು ದೊರಕಿದ್ದವು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.