
ಔರಾದ್: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಾಂಡಾಗಳಿಗೆ ಇ-ಖಾತಾ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ತಾಂಡಾ ನಿವಾಸಿಗಳು ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರದಿಂದ ಅನಿರ್ದಿಷ್ಟ ಪ್ರತಿಭಟನೆ ನಡೆಸುತ್ತಿದ್ದಾರೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 183ರಲ್ಲಿ 9 ತಾಂಡಾಗಳು ಬರುತ್ತವೆ. ಇಲ್ಲಿ 3-4 ತಲೆಮಾರುಗಳಿಂದ ಜನ ವಾಸವಾಗಿದ್ದು ಇವರನ್ನು ಸಕ್ರಮಗೊಳಿಸಲು ನಿರಂತರ ಹೋರಾಟ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಇ-ಖಾತಾ ಸಿಗದೆ ಸರ್ಕಾರದ ಸೌಲಭ್ಯದಿಂದಲೂ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಮುಖಂಡರು ಹೇಳಿದರು.
ಇದೇ ಬೇಡಿಕೆ ಮುಂದಿಟ್ಟುಕೊಂಡು ಆಗಸ್ಟ್ ತಿಂಗಳಲ್ಲಿ ಪ್ರತಿಭಟನೆ ನಡೆಸಿದಾಗ 30 ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು ಹೇಳಿದರು. ಆದರೆ ಇಲ್ಲಿಯ ತನಕ ಸಮಸ್ಯೆ ಪರಿಹಾರವಾಗಿಲ್ಲ ಎಂದು ಪಟ್ಟಣ ಪಂಚಾಯತ್ ಸದಸ್ಯ ಶಿವಾಜಿ ರಾಠೋಡ್ ತಿಳಿಸಿದರು.
ಪಟ್ಟಣ ಸಮೀಪದ 9 ತಾಂಡಾ ನಿವಾಸಿಗಳು 2-3 ತಲೆಮಾರಿನಿಂದ ವಾಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಇ-ಖಾತಾ ಹಾಗೂ ಮೂಲಸೌಲಭ್ಯ ನೀಡದೆ ವಂಚಿಸುವುದು ಸರಿಯಲ್ಲ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ಹೇಳಿದರು.
ರಾಜಕುಮಾರ ರಾಠೋಡ್, ಶಿವಾಜಿ ಚವಾಣ್, ರಾಜು ನಾಯಕ, ಪ್ರಭು ರಾಠೋಡ್, ದಿನೇಶ ರಾಠೋಡ್, ರಮೇಶ ಚವಾಣ್, ಭೀಮರಾವ ರಾಠೋಡ್, ಮುಕ್ತಾಬಾಯಿ ರಾಠೋಡ್, ಪಿಪಳಾಬಾಯಿ ಪವಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.