ADVERTISEMENT

ಔರಾದ್, ಭಾಲ್ಕಿಯಲ್ಲಿ ಅಬ್ಬರಿಸಿದ ಮಳೆ

ರಸ್ತೆ ಸಂಪರ್ಕ ಕಡಿತ, ಹೊಲಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 12:44 IST
Last Updated 10 ಜುಲೈ 2021, 12:44 IST
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಬೀದರ್‌ ಜಿಲ್ಲೆ ಔರಾದ್‌ ತಾಲ್ಲೂಕಿನ ವಡಗಾಂವ್ – ಕಂದಗೂಳ ನಡುವಿನ ಸೇತುವೆ ಮೇಲೆ ನೀರು ಹರಿಯಿತು
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಬೀದರ್‌ ಜಿಲ್ಲೆ ಔರಾದ್‌ ತಾಲ್ಲೂಕಿನ ವಡಗಾಂವ್ – ಕಂದಗೂಳ ನಡುವಿನ ಸೇತುವೆ ಮೇಲೆ ನೀರು ಹರಿಯಿತು   

ಬೀದರ್‌: ಜಿಲ್ಲೆಯ ಔರಾದ್, ಭಾಲ್ಕಿ, ಹುಮನಾಬಾದ್ ಹಾಗೂ ಬೀದರ್‌ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ.

ಭಾಲ್ಕಿ ತಾಲ್ಲೂಕಿನ ನಿಟ್ಟೂರ ಹೋಬಳಿಯಲ್ಲಿ 66 ಮಿ.ಮೀ, ಲಂಜವಾಡದಲ್ಲಿ 64.4 ಮಿ.ಮೀ, ಬೀರಿ(ಕೆ)ದಲ್ಲಿ 72.5 ಮಿ.ಮೀ, ಔರಾದ್‌ ತಾಲ್ಲೂಕಿನ ಚಿಂತಾಕಿ ಹೋಬಳಿಯಲ್ಲಿ 74.5 ಮಿ.ಮೀ ಮಳೆ ಸುರಿದಿದೆ. ಮಾಂಜ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಬೀದರ್ ತಾಲ್ಲೂಕಿನ ಕಮಠಾಣ, ಬಗದಲ್‌ ಪರಿಸರದಲ್ಲಿನ ಕಬ್ಬು ನೆಲಕ್ಕುರುಳಿದೆ. ಈಚೆಗಷ್ಟೇ ಮೊಳಕೆಯೊಡೆದ ಬೆಳೆಗಳು ನೀರಿನಲ್ಲಿ ಮುಳುಗಿವೆ.

ADVERTISEMENT

ಔರಾದ್‌ ತಾಲ್ಲೂಕಿನ ಸಂತಪುರ, ವಡಗಾಂವ್, ಚಿಂತಾಕಿ ಹೋಬಳಿಯಲ್ಲಿ ಮಳೆಯ ಅಬ್ಬರಕ್ಕೆ ಹಳ್ಳ ಕೊಳ್ಳ ಹಾಗೂ ಗಟಾರುಗಳು ಉಕ್ಕಿ ಹರಿದು ನೀರು ಮನೆಗಳಿಗೆ ನುಗ್ಗಿದೆ.

ಬೋರ್ಗಿ ಗ್ರಾಮದ ಜಗದೇವಿ ಮಾದಪ್ಪ ಮನೆಯೊಳಗೆ ನೀರು ನುಗ್ಗಿದೆ. ಚರಂಡಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಿಲ್ಲ. ಗ್ರಾಮ ಪಂಚಾಯಿತಿ ಅಸಹಾಯತೆ ವ್ಯಕ್ತಪಡಿಸಿದೆ. ರಾತ್ರಿಯಿಡೀ ಮನೆಯಲ್ಲಿ ನೀರು ನಿಂತ ಕಾರಣ ಸಮೀಪದ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಕುಟುಂಬದ ವಾಸ್ತವ್ಯಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

ವಡಗಾಂವ್– ಕಂದಗೂಳ ನಡುವಿನ ಸೇತುವೆ ಮೇಲಿಂದ ನೀರು ಹರಿದು ಈ ಭಾಗದ ಪ್ರಯಾಣಿಕರು ಪರದಾಡಿದರು. ಸಂತಪುರ– ವಡಗಾಂವ್ ನಡುವಿನ ನಾಗೂರ ಬಳಿಯ ಸೇತುವೆ ಮುಳಗಡೆಯಾಗಿ ಶನಿವಾರ ಬೆಳಿಗ್ಗೆ ತನಕ ಸಂಪರ್ಕ ಕಡಿತಗೊಂಡಿತ್ತು.

ಸಂತಪುರ– ಠಾಣಾಕುಶನೂರ ನಡುವಿನ ನಾಗೂರ (ಎಂ) ಬಳಿಯ ಬದಲಿ ರಸ್ತೆ ಮಳೆಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದೆ. ಈ ಭಾಗದ ಸಂಚಾರ ಸ್ಥಗಿತವಾಗಿದೆ. ಅನೇಕ ಹೊಲಗಳಿಗೆ ನೀರು ನುಗ್ಗಿ ವಾರದ ಹಿಂದೆ ಬಿತ್ತನೆ ಮಾಡಿದ ಸೋಯಾ, ಉದ್ದು, ಹೆಸರು, ಜೋಳ ನೀರು ಪಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.