ಬೀದರ್ನಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಆಟಿಸಂ ದಿನಾಚರಣೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ವಿಶೇಷಚೇತನ ಮಕ್ಕಳಿಗೆ ಕೇಕ್ ತಿನ್ನಿಸಿದರು
ಬೀದರ್: ’ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಬ್ರಿಮ್ಸ್) ಆಟಿಸಂ ವಿಭಾಗ ಸ್ಥಾಪಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ನಗರದ ಉಟಗೆ ನ್ಯೂರೊ ಮತ್ತು ಉಮಂಗ್ ವಿಶೇಷ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಆಟಿಸಂ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಆಟಿಸಂ ಪೀಡಿತ ಮಕ್ಕಳೊಂದಿಗೆ ಸಂವಾದ ನಡೆಸಿ, ಪೋಷಕರಿಗೆ ಧೈರ್ಯ ತುಂಬಿದ ಸಚಿವರು, ಬೀದರ್ ಜಿಲ್ಲೆಯಲ್ಲಿ ಆಟಿಸಂ ಪೀಡಿತ ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ಹಾಗೂ ಸೌಲಭ್ಯಗಳನ್ನು ಒದಗಿಸುವ ಅಗತ್ಯವಿದೆ. ಅದಕ್ಕಾಗಿ ಬ್ರಿಮ್ಸ್ನಲ್ಲಿ ವಿಶೇಷ ಆಟಿಸಂ ಚಿಕಿತ್ಸಾ ವಿಭಾಗ ಆರಂಭಿಸಬೇಕು ಎಂದು ಸ್ಥಳದಲ್ಲಿದ್ದ ಜಿಪಂ ಸಿಇಒ, ಡಿಎಚ್ಒ ಅವರಿಗೆ ಸೂಚಿಸಿದರು.
ವಿಜಯದೇವಿ ಫೌಂಡೇಶನ್ನ ಡಾ. ಅಭಿಜಿತ ಅವರು, ವಿಶೇಷ ಮಕ್ಕಳಿಗೆ ವಾಕರ್, ವೀಲ್ ಚೇರ್, ಜಿಮ್ ಬಾಲ್, ವೇಟ್ ಕಪ್ ಹಾಗೂ ಮಾತ್ರೆಗಳನ್ನು ವಿತರಿಸಿದರು. ಡಾ. ಪ್ರಶಾಂತ ಉಟಗೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಎಚ್.ಎಸ್. ಸಿಂಧು, ಡಾ. ಗಿರೀಶ, ಡಾ. ರತಿಕಾಂತ ಸ್ವಾಮಿ, ಡಾ. ಸಿ. ಆನಂದರಾವ್, ಡಾ.ಸುಭಾಷ ಪಾಟೀಲ, ಫೌಂಡೇಶನ್ ಕಾರ್ಯದರ್ಶಿ ಡಾ. ಭಗವಾನ ಮಳದಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ನಾಗರಾಜ ಮಠ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.