ಚಿಟಗುಪ್ಪ: ವೀರಶೈವ ಧರ್ಮ ಸಹಬಾಳ್ವೆ ಮತ್ತು ಸಮನ್ವಯತೆಗೆ ಹೆಸರಾದ ಧರ್ಮವಾಗಿದೆ ಎಂದು ಉಜ್ಜಯಿನಿಯ ಪ್ರಸನ್ನ ದಾರುಕ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು ಹೇಳಿದರು.
ಇಲ್ಲಿಯ ಮಡಿವಾಳೇಶ್ವರ ಗವಿ ಆವರಣದಲ್ಲಿ ಜರುಗಿದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಸಕಲ ಜೀವಿಗಳ ಕಲ್ಯಾಣ ಗುರುವಿನ ಮೂಲ ಆಶಯವಾಗಿದ್ದು, ಎಲ್ಲರನ್ನು ಧರ್ಮದ ತಳಹದಿಯ ಮೇಲೆ ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ಮಠಗಳ ಮೇಲಿದೆ ಎಂದು ಶ್ರೀಶೈಲ್ ಸೂರ್ಯ ಸಿಂಹಾಸನಾಧೀಶ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಾಶಿ ಜ್ಞಾನಸಿಂಹಾಸನಾಧೀಶ್ವರ ಪೀಠದ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು ಮಾತನಾಡಿದರು.
ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಅಧ್ಯಾತ್ಮ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಬೇಕು. ಅಂದಾಗ ಮಾತ್ರ ಸತ್ಯ, ನ್ಯಾಯ, ನೀತಿ, ಜೀವನ ಮೌಲ್ಯಗಳಿಗೆ ಬೆಲೆ ಬರುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ್ ಪಾಟೀಲ, ಭೀಮರಾವ್ ಪಾಟೀಲ, ಸೊಲ್ಲಾಪುರದ ಸಂಸದ ಜೈಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ರೇಣುಕಾ ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿ, ವೀರುಪಾಕ್ಷ ಶಿವಾಚಾರ್ಯ ಸ್ವಾಮೀಜಿ, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಅದ್ವೈತ ವಿಭಾಗದ ಮುಖ್ಯಸ್ಥ ಡಾ.ಗಣಪತಿ ಭಟ್, ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಡಾ.ಶೈಲೇಂದ್ರ ಬೆಲ್ದಾಳೆ, ರಾಯಬಸವಂತರಾಯ ದೇಶಮುಖ, ಬಿಎಸ್ಎಸ್ಕೆ ನಿರ್ದೇಶಕ ಮಲ್ಲಿಕಾರ್ಜುನ, ವೀರಣ್ಣ ಪಾಟೀಲ, ರಾಜಶೇಖರ್ ಕೊರವಾರ್, ವಿಜಯಕುಮಾರ, ಸೂರ್ಯಕಾಂತ, ಅಶೋಕ ಮಠಪತಿ ಇದ್ದರು.
ಅಯ್ಯಪ್ಪ ಸ್ವಾಮಿ ಹಿರೇಮಠದ ನೂತನ ಶ್ರೀಯವರಿಗೆ ಪಟ್ಟಾಧಿಕಾರ ಧಾರ್ಮಿಕ ವಿಧಿ ನಡೆಸಿದ ನಂತರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಎಂಬ ನಾಮಕರಣ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.