ಬೀದರ್: ಬಾಬುರಾವ್ ಮದಕಟ್ಟಿ ಒಬ್ಬ ಸಂಘ ಮತ್ತು ಸಂಘರ್ಷಜೀವಿ. ಅವರು ಮಾಡಿರುವ ಸಾಧನೆಗಿಂತ ಅವರಿಂದ ಸಾಧನೆ ಮಾಡಿದವರು ಬಹಳಷ್ಟು ಜನರಿದ್ದಾರೆ. ಅವರ ವ್ಯಕ್ತಿತ್ವ ವಿಶಿಷ್ಟವಾಗಿದೆ. ಆರ್.ಎಸ್.ಎಸ್. ಮೂಲಕ ಅನೇಕ ಸಾಮಾಜಿಕ ಕಾರ್ಯಗಳನ್ನ ಕೈಗೊಂಡ ಶ್ರೇಯಸ್ಸು ಬಾಬುರಾವ್ ಅವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಬಣ್ಣಿಸಿದರು.
ಬೀದರ್ ತಾಲ್ಲೂಕಿನ ಆಣದೂರವಾಡಿಯಲ್ಲಿ ಸಾಹಿತಿ ಎಂ.ಜಿ.ದೇಶಪಾಂಡೆ ವಿರಚಿತ ಬಾಬುರಾವ್ ಮದಕಟ್ಟಿಯವರ ಜೀವನ ಮತ್ತು ಬದುಕಿನ ಸಾಧನೆಯಾಧಾರಿತ ‘ಕರುಣಾಮಯಿ’ ಪುಸ್ತಕ ಬಿಡುಗಡೆ ಹಾಗೂ ಮಾಣಿಕಾಬಾಯಿ ಅವರ ಪುತ್ಥಳಿ
ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತನ್ನ ಹೆಸರಿಗೆ ಒಂದಿಂಚು ಜಮೀನು ಇಟ್ಟುಕೊಳ್ಳದೆ ಸರ್ವಸ್ವವೂ ಕುಟುಂಬ ಮತ್ತು ಸಮಾಜಕ್ಕೆ ಧಾರೆ ಎರೆದಿದ್ದು ವಿಶೇಷ. ಸಾಂಸ್ಕೃತಿಕ ಬದುಕು ತನ್ನದಾಗಿಸಿಕೊಂಡ ಮದಕಟ್ಟಿ ಅನೇಕ ಸಾಧಕರ ಬೆನ್ನೆಲುಬಾಗಿ ನಿಂತವರು ಎಂದು ನುಡಿದರು.
ಲೇಖಕ ಎಂ.ಜಿ. ದೇಶಪಾಂಡೆ ಮಾತನಾಡಿ, ಮದಕಟ್ಟಿಯವರದ್ದು ಹೋರಾಟದ ಬದುಕಾಗಿದೆ. ಜೀವನದುದ್ದಕ್ಕೂ ಸತ್ಯ ಶುದ್ಧ ಕಾಯಕ ಮಾಡಿದ ಅವರು ಎಲ್ಲಿಯೂ ಕಪ್ಪುಚುಕ್ಕೆ ಬರದಂತೆ ನಡೆದುಕೊಂಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಬುರಾವ್ ಮದಕಟ್ಟಿ ಮಾತನಾಡಿ, ಪ್ರತಿಯೊಬ್ಬರೂ ಹೋರಾಟದ ಬದುಕು ರೂಪಿಸಿಕೊಳ್ಳಬೇಕು. ಸಾಧನೆಗೆ ಸಂಕ್ಷಿಪ್ತ ಮಾರ್ಗ ಎಂದಿಗೂ ಒಳ್ಳೆಯದಲ್ಲ. ತನ್ನ ಕುಟುಂಬದ ತಂದೆ-ತಾಯಿ ಹಾಗೂ ಸಹೋದರರನ್ನು ಮಕ್ಕಳಂತೆ ಕಂಡು ಐಕ್ಯತೆಯಿಂದ ಬದುಕು ಸಾಗಿಸಿದರೆ ಇತರರಿಗೂ ಮಾದರಿಯಾಗುತ್ತದೆ ಎಂದು ತಿಳಿಸಿದರು.
ಮಹಾಂತ ವಿಶ್ವಾನಂದ ಸ್ವಾಮೀಜಿ ಸಾನಿಧ್ಯ ಹಾಗೂ ಬೆಳ್ಳೂರ ಸಿದ್ಧಾರೂಢ ಆಶ್ರಮದ ಮಾತಾ ಅಮೃತಾನಂದಮಯಿ, ಬ್ರಹ್ಮಕುಮಾರಿ ಕೇಂದ್ರದ ಬಿ.ಕೆ.ಜ್ಯೋತಿ ಬೆಹೆನ್ಜಿ ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ಗುಂಡಪ್ಪ ವಕೀಲ, ಪ್ರಕಾಶ ಖಂಡ್ರೆ, ಡಾ. ಬಸವರಾಜ ಪಾಟೀಲ ಅಷ್ಟೂರ, ಸಂಜಯ್ ಖೇಣಿ, ಬಿ.ಸಿ.ಮುದ್ದಪ್ಪ, ಬಿ.ಎಸ.ಕುದರೆ, ರಘುಶಂಖ ಭಾತಂಬ್ರಾ ಇದ್ದರು.
ನಿವೃತ್ತ ಪ್ರಾಧ್ಯಾಪಕ ಚಂದ್ರಕಾಂತ ಭಾಲ್ಕೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ಪಂಡಿತ್ ಮದಕಟ್ಟಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.