ADVERTISEMENT

ಮತ್ತೆ ಜೆಡಿಎಸ್ ಅಧಿಕಾರ ಹಿಡಿಯುವುದು ನಿಶ್ಚಿತ: ಬಂಡೆಪ್ಪ ಕಾಶೆಂಪುರ

ಬಸವಕಲ್ಯಾಣ: ಎತ್ತಿನ ಬಂಡಿಯಲ್ಲಿ ಕುಳಿತು ಗಮನಸೆಳೆದ ಮುಖಂಡರು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 5:30 IST
Last Updated 28 ಏಪ್ರಿಲ್ 2022, 5:30 IST
ಬಸವಕಲ್ಯಾಣದಲ್ಲಿ ಜೆಡಿಎಸ್‌ನಿಂದ ನಡೆದ ಜನತಾ ಜಲಧಾರೆ ಮೆರವಣಿಗೆಯಲ್ಲಿ ಜೆಡಿಎಸ್ ಮುಖಂಡರು ಎತ್ತಿನ ಬಂಡಿಯಲ್ಲಿ ಕುಳಿತು ಗಮನ ಸೆಳೆದರು
ಬಸವಕಲ್ಯಾಣದಲ್ಲಿ ಜೆಡಿಎಸ್‌ನಿಂದ ನಡೆದ ಜನತಾ ಜಲಧಾರೆ ಮೆರವಣಿಗೆಯಲ್ಲಿ ಜೆಡಿಎಸ್ ಮುಖಂಡರು ಎತ್ತಿನ ಬಂಡಿಯಲ್ಲಿ ಕುಳಿತು ಗಮನ ಸೆಳೆದರು   

ಬಸವಕಲ್ಯಾಣ: ‘ಜೆಡಿಎಸ್ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತ’ ಎಂದು ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿದರು.

ನಗರದಲ್ಲಿ ಬುಧವಾರ ಜೆಡಿಎಸ್ ಪಕ್ಷದಿಂದ ನಡೆದ ಜನತಾ ಜಲಧಾರೆ ರಥಯಾತ್ರೆಯ ಸಮಾರೋಪದಲ್ಲಿ ಮಾತನಾಡಿದರು.

‘ಜನತಾದಳ ಜನಪರ ಪಕ್ಷ. ಅಧಿಕಾರದಲ್ಲಿದ್ದಾಗ ಈ ತಾಲ್ಲೂಕಿನ 19000 ರೈತರ ಸಾಲ ಮನ್ನಾ ಆಗಿದೆ. ಮತ್ತೆ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತದೆ. ಪಂಚರತ್ನ ಯೋಜನೆ ಜಾರಿಗೊಳಿಸಿ ಶಿಕ್ಷಣ ಮತ್ತು ವೈದ್ಯಕೀಯ ಸೇವೆ ಉಚಿತವಾಗಿ ನೀಡಲಾಗುತ್ತದೆ. ಈ ಭಾಗದ ಕಲ್ಯಾಣ ಮಾಡದೆಯೇ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ಹೆಸರು ಇಟ್ಟಿರುವುದು ವಿಪರ್ಯಾಸ’ ಎಂದರು.

ADVERTISEMENT

‘ಈ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಇನ್ನಷ್ಟು ಬಲಗೊಳಿಸಬೇಕು. ಉಪ ಚುನಾವಣೆಯ ಪರಾಜಿತ ಅಭ್ಯರ್ಥಿ ಯಶ್ರಬಅಲಿ ಅವರು ನಿರಂತರವಾಗಿ ಪ್ರಯತ್ನಶೀಲರಾಗಿ ಕಾರ್ಯಕರ್ತರ ಪಡೆ ತಯಾರು ಮಾಡಬೇಕು’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಮಾತನಾಡಿ,‘ಜನತಾ ಜಲಧಾರೆ ಅಭಿಯಾನ ಬೀದರ್‌ನಿಂದ ಆರಂಭ ಆಗಿದ್ದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ’ ಎಂದರು.

ಮುಖಂಡ ಯಶ್ರಬಅಲಿ ಖಾದ್ರಿ ಮಾತನಾಡಿ,‘ಬಿಜೆಪಿ ಜನವಿರೋಧಿ ನೀತಿ ಅನುಸರಿಸುತ್ತಿದೆ. ರೈತರ ಸಂಕಷ್ಟ ಪರಿಹಾರಕ್ಕೆ ಆದ್ಯತೆ ನೀಡುವುದಿಲ್ಲ’ ಎಂದರು.

ಐಲಿನಜಾನ್ ಮಠಪತಿ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅರ್ಷದ್ ಮಹಾಗಾವಿ, ನಗರ ಘಟಕದ ಅಧ್ಯಕ್ಷ ಸುಶೀಲ್ ಆವಸ್ಥಿ, ಕಾರ್ಯಾಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿದರು.

ಪಕ್ಷದ ತಾಲ್ಲೂಕು ಮಹಾಪ್ರಧಾನ ಕಾರ್ಯದರ್ಶಿ ಬಸವಣ್ಣಪ್ಪ ನೆಲ್ಲಗಿ, ಶರಣಪ್ಪ ಪರೆಪ್ಪ, ಸಂಜೀವ ಸಂಗನೂರೆ, ಸಂಜೀವ ಶ್ರೀವಾಸ್ತವ, ಪ್ರೀತಂ ಮದಲವಾಡಾ, ಮಾರುತಿ ಫುಲೆ, ಧನರಾಜ ರಾಜೋಳೆ, ಜಬಿ ನವಾಜ್, ಅಸದ್, ತಾನಾಜಿ ತೋರಣೆಕರ್ ಪಾಲ್ಗೊಂಡಿದ್ದರು.

ಮೊದಲು ಕೋಟೆಯಿಂದ ಮುಖ್ಯ ರಸ್ತೆಯ ಮೂಲಕ ರಥದ ಮೆರವಣಿಗೆ ನಡೆಯಿತು. ಮುಖಂಡರು ಎತ್ತಿನ ಬಂಡಿಗಳಲ್ಲಿ ಕುಳಿತಿದ್ದರು.

ಮಹಿಳೆಯರು ಕುಂಭ ಕಳಶಗಳನ್ನು ಹೊತ್ತುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.