ಬೀದರ್: ಬಸವ ಜಯಂತಿ ಉತ್ಸವ ಸಮಿತಿಯ ಕಚೇರಿಯನ್ನು ನಗರದಲ್ಲಿ ಗುರುವಾರ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಉದ್ಘಾಟಿಸಿದರು.
‘ಬಸವಣ್ಣ ನಮ್ಮೆಲ್ಲರ ಸಾಂಸ್ಕೃತಿಕ ನಾಯಕ. ಬಸವಣ್ಣನವರ ಜಯಂತಿ ಬೇರೆಯವರ ಜಯಂತಿ ತರಹ ಅಲ್ಲ. ಇದೊಂದು ಮಾನವೀಯತೆ ಅಸ್ಮಿತೆಯ ಜಯಂತಿ. ಅನ್ನ, ಅರಿವು, ಆಶ್ರಯ, ಮೂಲಭೂತ ಸೌಕರ್ಯ ಹಾಗೂ ಮಾನವ ಹಕ್ಕುಗಳ ಪ್ರತಿಪಾದನೆ ಮಾಡಿದವರು ಬಸವಣ್ಣನವರು’ ಎಂದು ಸ್ವಾಮೀಜಿ ಹೇಳಿದರು.
ಸ್ತ್ರೀ ಸ್ವಾತಂತ್ರ್ಯ, ಆರ್ಥಿಕ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಎತ್ತಿ ಹಿಡಿದವರು ಬಸವಾದಿ ಶರಣರು. ಜಾಗತಿಕ ನೆಲೆಯಲ್ಲಿ ಪರಿಸರ ಉಳಿಸಿ ನೆಮ್ಮದಿಯ ಧರ್ಮ ಕಟ್ಟಿದ ಬಸವಣ್ಣ ನಮ್ಮೆಲ್ಲರ ಅಭಿಮಾನದ, ವೈಚಾರಿಕ ಪರಿಸರ, ಕೈಯಲ್ಲಿ ಲಿಂಗ ಕೊಟ್ಟು ಕಾಯಕ ಸಂಸ್ಕೃತಿ ಕಲಿಸಿ, ದಾಸೋಹ ಕಲ್ಪನೆ ಕಲಿಸಿದ ಯುಗ ಪರಿವರ್ತಕ ಎಂದು ತಿಳಿಸಿದರು.
ಹುಲಸೂರಿನ ಶಿವಾನಂದ ಸ್ವಾಮೀಜಿ, ಅಕ್ಕ ಗಂಗಾಂಬಿಕೆ, ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಗೌರವ ಅಧ್ಯಕ್ಷ ಡಾ. ರಜನೀಶ ವಾಲಿ, ಶಿವಶಂಕರ ಟೋಕರೆ, ವಿರೂಪಾಕ್ಷ ಗಾದಗಿ, ಶಿವಶರಣಪ್ಪ ವಾಲಿ, ಕುಶಾಲರಾವ ಪಾಟೀಲ, ಬಸವರಾಜ ಧನ್ನೂರ, ಶರಣಪ್ಪ ಮಿಠಾರೆ, ಬಾಬು ವಾಲಿ, ರಾಜೇಂದ್ರ ಕುಮಾರ ಗಂದಗೆ, ಸೂರ್ಯಕಾಂತ ಶೆಟಕಾರ, ಗುರುನಾಥ ಕೊಳ್ಳೂರ, ಬಸವರಾಜ ಭತಮುರ್ತೆ, ಸುರೇಶ ಸ್ವಾಮಿ, ಬಾಬು ದಾನಿ, ದೀಪಕ ವಾಲಿ, ರೇವಣಪ್ಪ ಮೂಲಗೆ, ಸಂಗಪ್ಪ ಹಿಪ್ಪಳಗಾಂವ ಮತ್ತಿತರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.