ADVERTISEMENT

ಬಸವ ಜಯಂತಿ ರಜೆ ರದ್ದು ಶಿಫಾರಸಿಗೆ ತೀವ್ರ ವಿರೋಧ

ಶಿಫಾರಸು ತಿರಸ್ಕರಿಸಲು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಮೇ 2019, 13:41 IST
Last Updated 29 ಮೇ 2019, 13:41 IST
ಬಸವರಾಜ ಧನ್ನೂರು
ಬಸವರಾಜ ಧನ್ನೂರು   

ಬೀದರ್: ಬಸವ ಜಯಂತಿ ಸೇರಿದಂತೆ ಮಹಾ ಪುರುಷರ ಜಯಂತಿಗಳಿಗೆ ನೀಡುತ್ತಿದ್ದ ಸಾರ್ವತ್ರಿಕ ರಜೆಗಳನ್ನು ರದ್ದುಪಡಿಸುವಂತೆ ಸಚಿವ ಕೃಷ್ಣ ಭೈರೇಗೌಡ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿರುವುದಕ್ಕೆ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬಸವ ಜಯಂತಿ, ಮಹಾವೀರ ಜಯಂತಿ, ವಾಲ್ಮೀಕಿ ಜಯಂತಿ, ಗುಡ್ ಫ್ರೈಡೇ, ಈದ್ ಮಿಲಾದ್, ಮಹಾಲಯ ಅಮಾವಾಸ್ಯೆಗಳಿಗೆ ಕೊಡುತ್ತಿದ್ದ ರಜೆಗಳನ್ನು ರದ್ದುಪಡಿಸಬೇಕು ಎಂದು ಶಿಫಾರಸು ಮಾಡುವ ಮೂಲಕ ಸಮಿತಿಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ಆರೋಪಿಸಿದ್ದಾರೆ.

ಜಯಂತಿ, ಹಬ್ಬ ಹರಿದಿನಗಳು ಭಾರತೀಯ ಸಂಸ್ಕೃತಿ, ಪರಂಪರೆಯ ಭಾಗವಾಗಿವೆ. ಮಹಾ ಪುರುಷರ ಶ್ರೇಷ್ಠ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸುವುದು ಹಾಗೂ ನಿಜ ಜೀವನದಲ್ಲಿ ಆಚರಣೆಗೆ ತರುವಂತೆ ಪ್ರೇರಣೆ ನೀಡುವುದು ಜಯಂತಿಗಳ ಆಚರಣೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಜಯಂತಿಗಳಿಗೆ ನೀಡುತ್ತಿದ್ದ ರಜೆ ರದ್ದುಪಡಿಸಿದರೆ ಸರ್ಕಾರಿ ನೌಕರರಿಗೆ, ವಿದ್ಯಾರ್ಥಿಗಳಿಗೆ, ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಜಯಂತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅನಾನುಕೂಲವಾಗಲಿದೆ. ಮಹಾ ಪುರುಷರ ತತ್ವಾದರ್ಶಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ಕೂ ಹಿನ್ನಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಜಯಂತಿಗಳು, ಹಬ್ಬ ಹರಿದಿನಗಳ ಆಚರಣೆಯಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದ ನೆಲೆಸಲು ಸಾಧ್ಯವಾಗಿದೆ. ಇವುಗಳಿಂದ ಸಮಾಜದಲ್ಲಿ ಬದಲಾವಣೆ ಕೂಡ ಆಗಿದೆ ಎಂದು ತಿಳಿಸಿದ್ದಾರೆ.

ಮಹಾ ಪುರುಷರ ಜಯಂತಿಗಳಿಗೆ ಕೊಡುತ್ತಿದ್ದ ರಜೆ ರದ್ದುಪಡಿಸುವುದು ಸೂಕ್ತವಲ್ಲ. ರಾಜ್ಯ ಸರ್ಕಾರ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸನ್ನು ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಮಹಾ ಪುರುಷರ ಜಯಂತಿಯ ರಜೆಯನ್ನು ರದ್ದುಪಡಿಸಬಾರದು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.