ಬಸವಕಲ್ಯಾಣ: `ಶರಣರ ನಾಡು ಬಸವಕಲ್ಯಾಣಕ್ಕೆ ಖಂಡ್ರೆ ಕುಟುಂಬದ ಕೊಡುಗೆ ಅಪಾರವಾಗಿದೆ. ನಮ್ಮ ಪ್ರಯತ್ನದಿಂದ ಇಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ತಾಲ್ಲೂಕಿನ ನಾರಾಯಣಪುರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ಈ ನೆಲದ ಬಗ್ಗೆ ವಿಶೇಷ ಕಾಳಜಿ ವಹಿಸಿ ಇಲ್ಲಿನ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದರು. ನನ್ನ ಅವಧಿಯಲ್ಲಿ ತಾಲ್ಲೂಕಿನ ಅನೇಕ ಕೆರೆಗಳಿಗೆ ನೀರು ಭರ್ತಿಯ ₹260 ಕೋಟಿ ವೆಚ್ಚದ ಯೋಜನೆ ಕಾರ್ಯಗತವಾಗಿದೆ. ₹620 ಕೋಟಿ ವೆಚ್ಚದ ಅನುಭವ ಮಂಟಪದ ರೂಪುರೇಷೆ ಮತ್ತು ಅಂದಾಜುವೆಚ್ಚಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದರು. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರು. ಆದರೂ, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮ ಆಗಿರುವುದರಿಂದ ಈ ಸತ್ಯ ಜನತೆಗೆ ಮುಟ್ಟುತ್ತಿಲ್ಲ’ ಎಂದರು.
ಮಾಜಿ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ‘10 ವರ್ಷದಲ್ಲಿ ಸಂಸದನಾಗಿ ಭಗವಂತ ಖೂಬಾ ಅವರು ಶೂನ್ಯ ಸಾಧನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬದವರಿಗೆ ಸಾಕಷ್ಟು ಅನುಕೂಲ ಆಗಿದೆ’ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ, ಅರ್ಜುನ ಕನಕ, ಧನರಾಜ ತಾಳಂಪಳ್ಳಿ, ಚಂದ್ರಕಾಂತ ಮೇತ್ರೆ, ಬಸವರಾಜ ಸ್ವಾಮಿ, ಬಾಬು ಹೊನ್ನಾನಾಯಕ್, ರವೀಂದ್ರ ಬೋರೋಳೆ, ಯಶ್ರಬಅಲಿ ಖಾದ್ರಿ, ಚೇತನ ಕಾಡೆ, ಸಿಕಂದರ ಶಿಂಧೆ, ಅಹ್ಮದಮಿಯ್ಯಾ, ಜೀತೇಂದ್ರ, ರೋಷನ, ವೆಂಕಮ್ಮ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.