ADVERTISEMENT

ಬಸವಕಲ್ಯಾಣ: ಸಾಂಪ್ರದಾಯಿಕ ತಿಂಡಿ ತಿನಿಸುಗಳ ಸಹಭೋಜನ, ಆರೋಗ್ಯ ಜಾಗೃತಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 5:10 IST
Last Updated 11 ಜನವರಿ 2026, 5:10 IST
ಬಸವಕಲ್ಯಾಣದ ಜೀಜಾಮಾತಾ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಆಹಾರ ಪ್ರದರ್ಶನ ಮತ್ತು ಆಹಾರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಬಸವಕಲ್ಯಾಣದ ಜೀಜಾಮಾತಾ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಆಹಾರ ಪ್ರದರ್ಶನ ಮತ್ತು ಆಹಾರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಬಸವಕಲ್ಯಾಣ: ನಗರದ ಜೀಜಾಮಾತಾ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಮತ್ತು ರಾಜಮಾತಾ ಜೀಜಾಬಾಯಿ ಅವರ ಜನ್ಮೋತ್ಸವ ಅಂಗವಾಗಿ ಶನಿವಾರ ಅಪರೂಪದ ಕಾರ್ಯಕ್ರಮ ನಡೆಯಿತು. 

ಆಹಾರ ಪ್ರದರ್ಶನ, ಆಹಾರ ಮತ್ತು ಆರೋಗ್ಯದ ಕುರಿತು ಉಪನ್ಯಾಸ ಎಲ್ಲರ ಗಮನಸೆಳೆಯಿತು. ಮೊದಲು ವೈದ್ಯರು ಮತ್ತು ವಿಷಯ ತಜ್ಞರಿಂದ ಆಹಾರ ಮತ್ತು ಆರೋಗ್ಯದ ಬಗ್ಗೆ ಉಪನ್ಯಾಸ ನಡೆಯಿತು. 

ಬಳಿಕ 50ಕ್ಕೂ ಅಧಿಕ ಸಾಂಪ್ರದಾಯಿಕ ತಿಂಡಿ ತಿನಿಸು, ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅದನ್ನು ಎಲ್ಲ ಮಕ್ಕಳಿಗೆ, ಪಾಲಕರು ಮತ್ತಿತರಿಗೆ ಊಟಕ್ಕೆ ಬಡಿಸಿ ಸಾಮೂಹಿಕ ‘ಸಹಭೋಜನ’ ನಡೆಸಿರುವುದು ವಿಶಿಷ್ಟವಾಗಿತ್ತು.

ADVERTISEMENT

ಜೋಳದ ಮತ್ತು ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಎಣ್ಣೋಳಗಿ, ಧಪಾಟಿ, ಚಪಾತಿ, ಶಾವಿಗೆ, ಹುಗ್ಗಿ, ಮೆಂತ್ಯೆ ಪರೋಟ, ದಶಮ್ಯಾ, ಬೆಲ್ಲದ ಉಂಡಿ, ಅಳ್ಳು ಪುಟಾಣಿ ಉಂಡಿ, ಕಡಬು, ಕೋಡುಬಳೆ, ಭಜ್ಜಿ, ಉಳ್ಳಾಗಡಿ ಭರತಾ, ಬದನೆಕಾಯಿ ಭರತಾ, ಕಡಲೆ ಬೆಳೆ, ಉದ್ದಿನ ಬೆಳೆ, ಹೆಸರು ಬೆಳೆ, ತೊಗರಿ ಬೆಳೆಗಳ ಬಗೆಬಗೆಯ ಪಲ್ಯಗಳು, ಪಲಾವ್ ರೈಸ್, ಮೊಸರನ್ನ, ಶಾವಿಗೆ, ಅಗಸೆ ಹಿಂಡಿ, ಕಾಯಿ ಹಿಂಡಿ, ಎಳ್ಳಿನ ಹಿಂಡಿ, ಕಾರೋಳ ಹಿಂಡಿ, ಲಿಂಬೆ, ಮಾವು ಮತ್ತು ಮೆಣಸಿನ ಉಪ್ಪಿನ ಕಾಯಿ, ಹಪ್ಪಳ, ಟೊಮೆಟೊ ಮತ್ತು ನುಗ್ಗೆ ಸೊಪ್ಪಿನ ಪಲ್ಯ ಹೀಗೆ ಬಗೆಬಗೆಯ ಖಾದ್ಯಗಳು ಪ್ರದರ್ಶನದಲ್ಲಿದ್ದವು.

‘ಪಾಲಕರ ಸಹಾಯದಿಂದ ಮಕ್ಕಳೇ ಇದೆಲ್ಲವನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಪ್ರದರ್ಶನದ ನಂತರದಲ್ಲಿ ಅವರೇ ಎಲ್ಲರಿಗೂ ಊಟಕ್ಕೆ ಬಡಿಸಿದರು' ಎಂದು ಶಿಕ್ಷಕರು ತಿಳಿಸಿದರು.

‘ಪ್ರದರ್ಶನದಲ್ಲಿ ಈ ಆಹಾರಗಳನ್ನು ನೋಡಿದಾಗ ಬಾಯಿಯಲ್ಲಿ ನೀರೋರಿತು. ಅವನ್ನೇ ಊಟಕ್ಕೆ ಬಡಿಸಿದಾಗ ಅವುಗಳ ರುಚಿ ಸಹ ಸವಿಯುವ ಅವಕಾಶ ದೊರಕಿತು. ಇಂಥ ಪ್ರದರ್ಶನ ಮತ್ತು ಸಹಭೋಜನ ಇದೇ ಮೊದಲ ಸಲ ನೋಡುತ್ತಿದ್ದೇನೆ' ಎಂದು ವೈದ್ಯೆ ಡಾ.ಅಪರ್ಣಾ ಜಗತಾಪ ಅಭಿಪ್ರಾಯಪಟ್ಟರು.

ಬಸವಕಲ್ಯಾಣದ ಜೀಜಾಮಾತಾ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಆಹಾರ ಪ್ರದರ್ಶನದ ಬಳಿಕ ಅದೇ ತಿಂಡಿ ತಿನಿಸುಗಳನ್ನು ಊಟಕ್ಕೆ ಬಡಿಸಿ ಸಹಭೋಜನ ಆಯೋಜಿಸಲಾಯಿತು

ಮಕ್ಕಳಿಗೆ ಸತ್ವಯುತ ಆಹಾರ ನೀಡಿ

‘ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾದರೆ ಮಾತ್ರ ಶಿಕ್ಷಣದಲ್ಲಿ ಪ್ರಗತಿ ಸಾಧಿಸಬಲ್ಲರು. ಆದ್ದರಿಂದ ಅವರಿಗೆ ಪ್ರತಿದಿನ ಸತ್ವಯುತ ಆಹಾರ ನೀಡುವುದು ತಂದೆ–ತಾಯಿ ಮತ್ತು ಪಾಲಕರ ಜವಾಬ್ದಾರಿ’ ಎಂದು ಮುಖಂಡ ಸತೀಶಕುಮಾರ ಮುಳೆ ಹೇಳಿದರು. ಪಿ.ಎಂ.ಪೋಷಣ ವಿಭಾಗ ಮತ್ತು ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಸಂಜೀವಕುಮಾರ ಕಾಂಗೆ ಮಾತನಾಡಿ ‘ಪೌಷ್ಟಿಕಾಂಶದ ಕೊರತೆಯಿಂದ ನಾನಾ ರೋಗಗಳು ಬರುತ್ತವೆ' ಎಂದರು. ಮಂಠಾಳ ಠಾಣೆ ಸಿಪಿಐ ಅಮೋಲ್ ಕಾಳೆ ಸ್ತ್ರೀರೋಗ ತಜ್ಞೆ ಡಾ.ಸುಶೀಲಾಬಾಯಿ ಹೊಳಕುಂದೆ ವೈದ್ಯೆ ಡಾ.ಅಪರ್ಣಾ ಜಗತಾಪ ಅಮೃತರೆಡ್ಡಿ ಪ್ರತಾಪ ಸೂರ್ಯವಂಶಿ ದ್ವಾರಕಾಬಾಯಿ ಹಿಪ್ಪರ್ಗೆ ಬಾಲಾಜಿ ಬಿರಾದಾರ ಮಾತನಾಡಿದರು. ಪ್ರಾಚಾರ್ಯ ದಯಾನಂದ ಸೂರ್ಯವಂಶಿ ಪ್ರಕಾಶ ದಾಡಗೆ ಸೋಮನಾಥ ಬಿರಾದಾರ ಅನಿತಾ ಕಟ್ಟಿಮನಿ ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೆಗಾಂವ ಸೂರಜ್ ಪಾಟೀಲ ದೀಪಕ ನಾಗದೆ ಉಪಸ್ಥಿತರಿದ್ದರು.