ADVERTISEMENT

ಕೆರೆ ಅಭಿವೃದ್ಧಿಗೆ ಶಾಸಕ ಸೂಚನೆ

ಆಲಗೂಡು ಕೆರೆಗೆ ನಾರಾಯಣರಾವ್‌ ಭೇಟಿ: ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 7 ಮೇ 2020, 9:22 IST
Last Updated 7 ಮೇ 2020, 9:22 IST
ಬಸವಕಲ್ಯಾಣ ತಾಲ್ಲೂಕಿನ ಆಲಗೂಡ ಕೆರೆಯನ್ನು ಮಂಗಳವಾರ ಶಾಸಕ ಬಿ.ನಾರಾಯಣರಾವ್ ವೀಕ್ಷಿಸಿದರು
ಬಸವಕಲ್ಯಾಣ ತಾಲ್ಲೂಕಿನ ಆಲಗೂಡ ಕೆರೆಯನ್ನು ಮಂಗಳವಾರ ಶಾಸಕ ಬಿ.ನಾರಾಯಣರಾವ್ ವೀಕ್ಷಿಸಿದರು   

ಬಸವಕಲ್ಯಾಣ: ತಾಲ್ಲೂಕಿನ ಆಲಗೂಡ ಕೆರೆಯಲ್ಲಿನ ಹೂಳು ತೆಗೆದು ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಶಾಸಕ ಬಿ.ನಾರಾಯಣರಾವ್ ಸಲಹೆ ನೀಡಿದ್ದಾರೆ.

ಗ್ರಾಮದಲ್ಲಿ ಕೈಗೊಂಡ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ಅವರು ಕೆರೆಗೂ ಭೇಟಿ ನೀಡಿದರು.

‘ಕೆರೆಯಲ್ಲಿ 110 ಕಾರ್ಮಿಕರು ಕೆಲಸ ಕೈಗೊಂಡಿರುವುದು ಉತ್ತಮ ಬೆಳವಣಿಗೆ. ಕೊರೊನಾ ಲಾಕ್ ಡೌನ್ ನಿಂದಾಗಿ ಗ್ರಾಮೀಣ ಭಾಗದಲ್ಲಿನ ಕೂಲಿ ಕಾರ್ಮಿಕರು ಕಂಗೆಟ್ಟು ಹೋಗಿದ್ದು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಆದ್ದರಿಂದ ಎಲ್ಲ ಗ್ರಾಮಗಳಲ್ಲಿ ಖಾತರಿ ಕಾಮಗಾರಿ ಕೈಗೊಳ್ಳಲಾಗಿದೆ. ಇಲ್ಲಿನ ಕೆರೆ ಅತಿ ಹಳೆಯದಾಗಿದೆ. ಆದರೂ, ಹೂಳು ತುಂಬಿದ್ದರಿಂದ ನೀರಿನ ಸಂಗ್ರಹಣೆ ಕಡಿಮೆಯಾಗಿದ್ದು ರೈತರಿಗೆ ಇದರಿಂದ ಅನುಕೂಲ ಆಗಿಲ್ಲ. ಇನ್ನು ಮುಂದೆ ಹೆಚ್ಚಿನ ನೀರಿನ ಸಂಗ್ರಹ ಆಗಲು ಯೋಜನೆ ರೂಪಿಸಬೇಕು’ ಎಂದು ಅಧಿಕಾರಿಗಳಿಗೆ ಹೇಳಿದರು.

ADVERTISEMENT

‘ಕೆರೆ ದಂಡೆಯಲ್ಲಿ ಸಸಿಗಳನ್ನು ನೆಟ್ಟು ಗಿಡಗಳನ್ನು ಬೆಳೆಸಬೇಕು. ಗ್ರಾಮದಲ್ಲಿನ ಇನ್ನೂ ಹೆಚ್ಚಿನ ಜನರು ಖಾತರಿ ಕೆಲಸಕ್ಕೆ ಹಾಜರಾಗಬೇಕು. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೆಲಸ ನಿರ್ವಹಿಸಬೇಕು. ಅಂತರ ಕಾಪಾಡಬೇಕು. ಸರ್ಕಾರದ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು' ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ್, ಇಒ ಮಡೋಳಪ್ಪ, ಮುಖಂಡರಾದ ನೀಲಕಂಠ ರಾಠೋಡ, ಶರಣು ಪೆದ್ದೆ, ಪಂಕಜ್ ಸೂರ್ಯವಂಶಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ರಾಠೋಡ, ಸಹಾಯಕ ನಿರ್ದೇಶಕ ಜಯಪ್ರಕಾಶ ಚವಾಣ್, ಪಿಡಿಒ ಮುತ್ತುರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.