ADVERTISEMENT

ಬಸವಕುಮಾರ ಪಾಟೀಲ ಬದುಕು ಮಾದರಿ

ಅಭಿನಂದನಾ ಸಮಾರಂಭದಲ್ಲಿ ಮಾತೆ ಗಂಗಾದೇವಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 15:41 IST
Last Updated 14 ಮೇ 2022, 15:41 IST
ಬೀದರ್‌ನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಚಿಂತಕ ಬಸವಕುಮಾರ ಪಾಟೀಲ ವ್ಯಕ್ತಿತ್ವ ಕುರಿತ ಕೃತಿ ಬಿಡುಗಡೆ ಮಾಡಲಾಯಿತು
ಬೀದರ್‌ನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಚಿಂತಕ ಬಸವಕುಮಾರ ಪಾಟೀಲ ವ್ಯಕ್ತಿತ್ವ ಕುರಿತ ಕೃತಿ ಬಿಡುಗಡೆ ಮಾಡಲಾಯಿತು   

ಬೀದರ್: ಸ್ವಾರ್ಥಕ್ಕಾಗಿ ಕೆಲಸ ಮಾಡುವ ಇಂದಿನ ದಿನಮಾನಗಳಲ್ಲಿ ಧರ್ಮ, ಸಮಾಜ ಹಾಗೂ ದೇಶಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಬಸವಕುಮಾರ ಪಾಟೀಲ ಅವರ ಬದುಕು ಮಾದರಿಯಾಗಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ ನುಡಿದರು.


ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ 60ನೇ ಜನ್ಮದಿನದ ನಿಮಿತ್ತ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.


ಬಸವಧರ್ಮ ಪೀಠದೊಂದಿಗೆ ಬಸವಕುಮಾರ ಪಾಟೀಲ ಬಹುದಿನಗಳ ನಂಟು ಹೊಂದಿದ್ದಾರೆ. ಬಸವ ತತ್ವ ಪ್ರಚಾರಕ್ಕಾಗಿ ಅವಿರತ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.

ADVERTISEMENT


ಚಲನಚಿತ್ರ ನಟ ಅಶೋಕ್ ಮಾತನಾಡಿ, ಬಸವಣ್ಣ ಸ್ವಾರ್ಥಕ್ಕಾಗಿ ಬದುಕಿರಲಿಲ್ಲ. ತಮ್ಮ ಜೀವನವನ್ನು ಸಮಾಜಕ್ಕೆ ಸಮರ್ಪಿಸಿಕೊಂಡಿದ್ದರು. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಬಸವಕುಮಾರ ಪಾಟೀಲ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.


ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ, ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ, ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಬಸವಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ, ಗಂಗಾಂಬಿಕೆ ಅಕ್ಕ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಶಾರದಾ ತಾಯಿ, ದಯಾನಂದ ಸ್ವಾಮಿ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಗುಣತೀರ್ಥದ ಬಸವಪ್ರಭು ಸ್ವಾಮೀಜಿ ಮಾತನಾಡಿದರು.


ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಅಬ್ದುಲ್ ಖದೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಕುಮಾರ ಪಾಟೀಲ ವ್ಯಕ್ತಿತ್ವ ಕುರಿತು ಸಾಹಿತಿಗಳಾದ ಪಂಚಾಕ್ಷರಿ ಪುಣ್ಯಶೆಟ್ಟಿ ಹಾಗೂ ಚಂದ್ರಪ್ಪ ಹೆಬ್ಬಾಳೆ ರಚಿಸಿದ ಬಸವ ಬೆಳಕು ಕೃತಿ ಹಾಗೂ ಅಂಚೆ ಇಲಾಖೆ ಹೊರ ತಂದ ಬಸವಕುಮಾರ ಪಾಟೀಲರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಕಲಬುರಗಿಯ ಸಾಹಿತಿ ಡಾ. ಡಿ.ಎನ್. ಪಾಟೀಲ ಗ್ರಂಥದ ಪರಿಚಯ ನೀಡಿದರು.


ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 60 ದಂಪತಿಗೆ ಬಸವ ನೀಲಗಂಗಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಭಿನಂದನಾ ಸಮಿತಿಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಿವಶಂಕರ ಟೋಕರೆ, ಪ್ರಧಾನ ಕಾರ್ಯದರ್ಶಿ ಪಂಡಿತ ಕೆ. ಬಾಳೂರೆ, ಸಹ ಕಾರ್ಯದರ್ಶಿ ರಮೇಶ ಚಿಲ್ಲರ್ಗಿ, ಖಜಾಂಚಿ ಧನರಾಜ ಬುಯ್ಯಾ ಇದ್ದರು.


ಇದಕ್ಕೂ ಮುನ್ನ ಕನ್ನಡಾಂಬೆ ವೃತ್ತದಿಂದ ರಂಗ ಮಂದಿರದ ವರೆಗೆ ಬಸವ ಜ್ಯೋತಿ ಮೆರವಣಿಗೆ ನಡೆಯಿತು. ವೇಷಧಾರಿಗಳು, ವಿವಿಧ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.