ಭಾಲ್ಕಿ: ಮಹಾಮಾನವತಾವಾದಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಲು ಒತ್ತಾಯಿಸಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮುಖ್ಯಮಂತ್ರಿ ಗೆ ಪತ್ರ ಬರೆದಿದ್ದಾರೆ.
ದೇಶದ ಪ್ರತಿ ರಾಜ್ಯಗಳು ತಮ್ಮ ಸಾಂಸ್ಕೃತಿಕ ಅಸ್ಮಿತೆಯ ಬಗ್ಗೆ ಚಿಂತಿಸುತ್ತಿವೆ. ಮಹಾರಾಷ್ಟ್ರ ಛತ್ರಪತಿ ಶಿವಾಜಿ, ತಮಿಳುನಾಡು ತಿರುವಳ್ಳುವರ್, ಪಶ್ಚಿಮ ಬಂಗಾಳ ರವೀಂದ್ರನಾಥ ಟ್ಯಾಗೋರ್, ಕೇರಳ ನಾರಾಯಣಗುರು ಎನ್ನುತ್ತಿವೆ. ಹಾಗಾಗಿ, ನಮ್ಮ ರಾಜ್ಯಕ್ಕೂ ಒಬ್ಬರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಆರಿಸಿಕೊಳ್ಳಬೇಕಾದ ಸಾಮಾಜಿಕ, ಸಾಂಸ್ಕೃತಿಕ ಅವಶ್ಯಕತೆ ಇದೆ. ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಅಸಹಿಷ್ಣುತೆಯಿಂದ ನಲುಗುತ್ತಿರುವ ಈ ಸಂದರ್ಭದಲ್ಲಿ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಜೀವಿಗಳ ಚಳವಳಿಯನ್ನು ಕಟ್ಟಿ ಮಾನವ ಕುಲಕ್ಕೆ ಬಾಧಿಸಿದ ಎಲ್ಲಾ ರೀತಿಯ ತಾರತಮ್ಯವನ್ನು ತೊಡೆದು ಹಾಕಿ, ಮನುಷ್ಯರಿಂದ ಮನುಷ್ಯರ ಶೋಷಣೆ ಇಲ್ಲದಂತ ನವ ಸಮಾಜ ಕಟ್ಟಲು ಶ್ರಮಿಸಿದರು ಎಂದರು.
ಬಸವಣ್ಣನವರಲ್ಲಿ ಮಾತ್ರ ಬುದ್ಧ, ಅಂಬೇಡ್ಕರ್, ಕನಕ, ಗಾಂಧಿ, ಕುವೆಂಪು ಅವರಂತಹ ಮಹಾಮಹಿರನ್ನು ನೋಡಲು ಸಾಧ್ಯ. ಬಸವಣ್ಣನವರ ವಿಚಾರಧಾರೆಯ ಮೇಲೆ ಅಪಾರ ನಂಬಿಕೆ ಹೊಂದಿರುವ ತಾವು ಈ ಬಗ್ಗೆ ಮುತುವರ್ಜಿ ವಹಿಸಿ ರಾಜ್ಯಕ್ಕೆ ಮಹಾದಾರ್ಶನಿಕ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.