ADVERTISEMENT

ನಗರವನ್ನು ಸುಂದರವಾಗಿಸಲು ಪಣ ತೊಡಿ: ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2023, 13:20 IST
Last Updated 15 ನವೆಂಬರ್ 2023, 13:20 IST
ಬೀದರ್‌ನಲ್ಲಿ ಕೆಕೆಆರ್‌ಡಿಬಿ ಅನುದಾನದಯೋಜನೆಯಡಿ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರ ಅನುದಾನದಡಿ ನಿರ್ಮಿಸಿದ ಪಾದಚಾರಿ ಮಾರ್ಗ ಹಾಗೂ ಬೀದಿ ದೀಪಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಬೀದರ್‌ನಲ್ಲಿ ಕೆಕೆಆರ್‌ಡಿಬಿ ಅನುದಾನದಯೋಜನೆಯಡಿ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರ ಅನುದಾನದಡಿ ನಿರ್ಮಿಸಿದ ಪಾದಚಾರಿ ಮಾರ್ಗ ಹಾಗೂ ಬೀದಿ ದೀಪಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು   

ಬೀದರ್: ‘ಗ್ರಾಮೀಣ ಭಾಗದ ಜನರು ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ನಗರಗಳತ್ತ ಮುಖ ಮಾಡುತ್ತಿರುವುದರಿಂದ ನಗರಗಳು ಬೆಳೆದು ಮೂಲಭೂತ ಸೌಕರ್ಯದ ಕೊರತೆ ಮತ್ತು ಪರಿಸರ ಮಾಲಿನ್ಯದ ಸಮಸ್ಯೆ ಉಂಟಾಗುತ್ತಿದೆ. ನಗರ ಸಭೆ ಅಧ್ಯಕ್ಷರು ಮತ್ತು ಸದಸ್ಯರು ಪರಿಸರ ರಕ್ಷಣೆಯ ಜೊತೆಗೆ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಸ್ವಚ್ಚ, ಸುಂದರ ಬೀದರ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ.ಬಿ ಖಂಡ್ರೆ ಹೇಳಿದರು.

ನಗರದಲ್ಲಿ ಮಂಗಳವಾರ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರ ಅನುದಾನದಡಿ ನಿರ್ಮಿಸಿದ ಪಾದಚಾರಿ ಮಾರ್ಗ ಹಾಗೂ ಬೀದಿ ದೀಪಗಳ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಕೆಕೆಆರ್‌ಡಿಬಿ ಯೋಜನೆಯಡಿ ಅಳವಡಿಸಿದ ಬೀದಿ ದೀಪಗಳ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ಹಿಂದೆ ನಾನು ಪೌರಾಡಳಿತ ಖಾತೆ ಸಚಿವನಾಗಿದ್ದಾಗ  ಬೀದರ್ ಜಿಲ್ಲೆಯ ನಗರಗಳ ಅಭಿವೃದ್ದಿಗೆ ನೂರಾರು ಕೋಟಿ ಅನುದಾನ ನೀಡಿದ್ದೇನೆ. ಅದೇ ಅನುದಾನದಲ್ಲಿ ಕಾಮಗಾರಿಗಳು ಇಂದಿಗೂ ನಡೆಯುತ್ತಿವೆ. ಈಗ ಮತ್ತೆ ನಾನು ರಹೀಂ ಖಾನ್ ಸೇರಿ ಯೋಜನೆ ಹಾಕಿಕೊಂಡಿದ್ದೇವೆ. ಈ ಯೋಜನೆಯಡಿ ಬೀದರ್‌ಗೆ ₹10 ಕೋಟಿ, ಭಾಲ್ಕಿಗೆ ₹10 ಕೋಟಿ ಅನುದಾನ ಮಂಜೂರು ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

ಸಚಿವ ರಹೀಂಖಾನ್ ಮಾತನಾಡಿ,‘ಅಮೃತ ಯೋಜನೆಯಡಿ ಉಳಿತಾಯವಾದ ₹60 ಕೋಟಿ ಅನುದಾನ ಪ್ರಸ್ತಾವ ಬಂದ ಹಿನ್ನೆಲೆಯಲ್ಲಿ ಬೀದರ್‌ಗೆ ಮಂಜೂರು ಮಾಡಿದ್ದೇನೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ,‘ಈ ಬಡಾವಣೆಯ ನಗರಸಭೆ ಸದಸ್ಯ ಹಾಗೂ ನಿವಾಸಿಗಳ ಮನವಿಯ ಮೇರೆಗೆ ಕೆಕೆಆರ್‌ಡಿಬಿಯಲ್ಲಿ ನನಗೆ ಬರುವ ₹50 ಲಕ್ಷ ಅನುದಾನದಲ್ಲಿ ಈ ರಸ್ತೆ ಪಾದಚಾರಿ ಮಾರ್ಗ ಹಾಗೂ ಬೀದಿ ದೀಪ ಅಳವಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಸದಸ್ಯ ಪ್ರಶಾಂತ ದೊಡ್ಡಿ, ಬಸವರಾಜ ಜಾಬಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.