ADVERTISEMENT

ಜಿಲ್ಲೆಗೆ ಅಗತ್ಯ ಪ್ರಮಾಣದ ಗೊಬ್ಬರ ಪೂರೈಸಿ: ಈಶ್ವರ ಖಂಡ್ರೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 4:08 IST
Last Updated 3 ನವೆಂಬರ್ 2021, 4:08 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಭಾಲ್ಕಿ: ‘ಕೇಂದ್ರ ರಸಗೊಬ್ಬರ ಖಾತೆ ಸಚಿವರ ಜಿಲ್ಲೆಯಲ್ಲೇ ಡಿಎಪಿ ಕೊರತೆ ಎದುರಾಗಿದೆ. ಅನ್ನದಾತರಿಗೆ ಹಿಂಗಾರು ಹಂಗಾಮಿಗೆ ಅಗತ್ಯ ಪ್ರಮಾಣದ ಗೊಬ್ಬರ ಪೂರೈಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿಗಳ ಫಲವಾಗಿ ಇಂದು ರಾಜ್ಯದಾದ್ಯಂತ ರಸಗೊಬ್ಬರದ ಕೊರತೆ ಕಾಡುತ್ತಿದೆ. ಸತ್ಯ ಒಪ್ಪಿಕೊಳ್ಳಲು ಎದೆಗಾರಿಕೆ ಇಲ್ಲದ ಬಿಜೆಪಿ ಸುಳ್ಳು ಹೇಳುತ್ತ ಜನರನ್ನು ಮರಳು ಮಾಡಲು ಯತ್ನಿಸುತ್ತಿದೆ. ಡಿಎಪಿ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ಪೂರೈಸಲಾಗುತ್ತಿದೆ. ಆನ್‌ಲೈನ್‌ನಲ್ಲಿ ಸಾಕಷ್ಟು ದಾಸ್ತಾನಿದೆ ಎಂದು ಹೇಳುತ್ತಿದೆ. ಆದರೆ ಜಿಲ್ಲೆಯ ಯಾವ ಗೊಬ್ಬರದ ಮಳಿಗೆಯಲ್ಲಿ ಡಿಎಪಿ ಮಾರಾಟವಾಗುತ್ತಿದೆ. ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೆ ಸರ್ಕಾರ ಏಕೆ ತಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.

ರೈತರ ಆಕ್ರೋಶದ ಕಟ್ಟೆ ಒಡೆಯುವ ಮುನ್ನ ಕೇಂದ್ರ, ರಾಜ್ಯ ಸರ್ಕಾರಗಳು ಎಚ್ಚೆತ್ತು ಹಿಂಗಾರು ಬೆಳೆಗೆ ಅಗತ್ಯ ಪ್ರಮಾಣದ ಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಈಗಾಗಲೇ ಹಠಾತ್ ಸುರಿದ ಅಕಾಲಿಕ ಮಳೆಯಿಂದ ಕಲ್ಯಾಣ ಕರ್ನಾಟಕ ಭಾಗದ ರೈತರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ರೈತರ ಬೆಳೆ ಹಾನಿಗೆ ಪರಿಹಾರ ಇನ್ನು ಸಿಕ್ಕಿಲ್ಲ. ಪರಿಹಾರ ನೀಡಿಕೆಯಲ್ಲೂ ಮೋಸ ಆಗುತ್ತಿದೆ. ಬಿಜೆಪಿ ಉದ್ಯಮಿಗಳ, ಖಾಸಗಿ ವಿಮಾ ಕಂಪನಿಗಳ ಪರ ವಾಗಿ ಕಾರ್ಯನಿ ರ್ವಹಿ ಸುತ್ತಿದ್ದು, ಬಡ ರೈತರ ಕಲ್ಯಾಣ ಕಡೆಗಣಿ ಸಿದೆ. ಹೀಗಾ ಗಿಯೇ 13 ರಾಜ್ಯಗಳಲ್ಲಿ 29 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಡೀಸೆಲ್, ಪೆಟ್ರೋಲ್ ಹಾಗೂ ಅಡುಗೆ ಅನಿಲ ದರ ಏರಿಕೆಯಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಗಾಯದ ಮೇಲೆ ಬರೆ ಎಳೆದಂತೆ ರೈತರಿಗೆ ಈಗ ಡಿಎಪಿ ಗೊಬ್ಬರ ಸಿಗುತ್ತಿಲ್ಲ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ರಿಯಾಯಿತಿ ದರದಲ್ಲಿ ಪೂರೈಸಬೇಕಾದದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕರ್ತವ್ಯ. ಆದರೆ ರೈತರ ಹಿತವನ್ನೇ ಮರೆತಿರುವ ಬಿಜೆಪಿ ಸರ್ಕಾರಕ್ಕೆ ಅನ್ನದಾತರ ಕಣ್ಣಿರು ಕಾಣಿಸುತ್ತಿಲ್ಲ. ರೈತರ ಅಳಲು ಕೇಳುತ್ತಿಲ್ಲ ಎಂದು ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಪರವಾನಗಿ ಇರುವ ಗೊಬ್ಬರ ಮಾರಾಟ ಮಳಿಗೆಯಲ್ಲಿ ಎಷ್ಟು ದಾಸ್ತಾನಿದೆ. ನಿತ್ಯ ಎಷ್ಟು ಮಾರಾಟವಾಗುತ್ತಿದೆ ಎಂಬುದನ್ನು ಆಡಿಟ್ ಮಾಡಿಸಿ ರೈತರ ನೆರವಿಗೆ ಬನ್ನಿ. ಅದು ಬಿಟ್ಟು ಮುಗಿಲಲ್ಲಿದೆ. ಆಕಾಶದಲ್ಲಿದೆ. ಗಿರಿಯ ಮೇಲಿದೆ ಎಂದು ಕಾಗೆ ಹಾರಿಸಬೇಡಿ. ಸರ್ಕಾರ ಈಗಲೂ ಕಣ್ಣುಮುಚ್ಚಿ ಕುಳಿತರೆ, ಮುಂದೆ ರೈತರಿಗೆ ಆಗುವ ಎಲ್ಲ ನಷ್ಟಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಈಶ್ವರ ಖಂಡ್ರೆ ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.