ಬೀದರ್: ‘ಇಂದು ದೇಶದಲ್ಲಿ ಮನುವಾದ, ಅಸಮಾನತೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೆಲಸಗಳು ಸರ್ಕಾರದಿಂದಲೇ ನಡೆಯುತ್ತಿವೆ’ ಎಂದು ಸುಪ್ರೀಂ ಕೋರ್ಟ್ ವಕೀಲ ಭಾನುಪ್ರತಾಪ ಸಿಂಗ್ ಹೇಳಿದರು.
ಕರ್ನಾಟಕ ಪಂಚಶೀಲ ಸಾಹಿತ್ಯ ಕಲಾ ಸಮಿತಿ ಬೀದರ್ ಜಿಲ್ಲಾ ಘಟಕದಿಂದ ನಾಗಪುರದ ದೀಕ್ಷಾಭೂಮಿ ಕಾರ್ಯಕ್ರಮದ ಅಂಗವಾಗಿ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಹುಜನ ಜಾಗೃತಿ ಸಮಾವೇಶ ಹಾಗೂ ರಾಜ್ಯಮಟ್ಟದ ಬುದ್ಧ, ಭೀಮ ಗೀತೆಗಳ ಭಜನೆ ಸಂಗೀತ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
‘ಶಾಂತಿ, ಸಮಾನತೆ, ಬಂಧುತ್ವ ಮರು ನಿರ್ಮಾಣ ಮಾಡಲು ದೇಶದ ಬಹುಜನರು ಡಾ.ಬಿ.ಆರ್.ಅಂಬೇಡ್ಕರ್ ಅವರು ತೋರಿಸಿದ ತಥಾಗತ ಗೌತಮ ಬುದ್ಧನ ಬೌದ್ಧ ಧರ್ಮ ಸ್ವೀಕರಿಸಿ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕು. ಮನುವಾದ ದೇಶದಿಂದ ಶಾಶ್ವತವಾಗಿ ನಿರ್ನಾಮ ಮಾಡಲು ಸಾಮೂಹಿಕ ಹೋರಾಟದ ಅವಶ್ಯಕತೆ ಇದೆ’ ಎಂದು ಪ್ರತಿಪಾದಿಸಿದರು.
‘ಬಹುಜನರು ದೇಶವನ್ನು ಗೌರವಿಸುವಾಗ ಭಾರತ ಅಥವಾ ಇಂಡಿಯಾ ಎಂದು ಹೇಳಬೇಕು. ಹಿಂದೂಸ್ತಾನ ಪದ ಬಳಸಬಾರದು. ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲ. ಡಾ.ಅಂಬೇಡ್ಕರ್ ಅವರು ಸಾಕಷ್ಟು ನೋವು ಸಹಿಸಿಕೊಂಡು ನಮ್ಮೆಲರಿಗೆ ಸಂವಿಧಾನದ ಮೂಲಕ ಮುಕ್ತಿ ನೀಡಿದ್ದಾರೆ. ಅವರ ಸಂವಿಧಾನ ಸಂಪೂರ್ಣ ಅನುಷ್ಠಾನ ಆಗಬೇಕಾದರೆ ಬಹುಜನರು ರಾಜಕೀಯವಾಗಿ ಮುಂದೆ ಬರಬೇಕಿದೆ’ ಎಂದರು.
ಭಂತೆ ಜ್ಞಾನ ಸಾಗರ ಸಾನ್ನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ಲಕ್ಷ್ಮಣ ಕಾಂಚೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವೈಜಿನಾಥ ಸೂರ್ಯವಂಶಿ, ಬಿ.ಕೃಷ್ಣಪ್ಪ, ವಿಶ್ವನಾಥ ದೀನೆ, ವಿಜಯಕುಮಾರ ಸೋನಾರೆ, ದಯಾನಂದ ನೌಲೆ, ಡಾ.ಅಮೃತ ಎಸ್.ಮೊಳಕೇರೆ, ರಾಜಕುಮಾರ ಮೂಲಭಾರತಿ, ಚಂದ್ರಕಾಂತ ನಿರಾಟೆ, ಪ್ರಕಾಶ ಠಾಕೂರ್, ಮಹೇಶ ಗೋರನಾಳಕರ್, ಬಬ್ರುವಾಹನ ಬೆಳಮಗಿ, ಸಂಜುಕುಮಾರ ಡಾಕುಳಗಿ, ಕಂಟೆಪ್ಪ ಪೂಜಾರಿ, ಸುರೇಶ ಜೋಜನಾಕರ್, ರಾಜಕುಮಾರ ಗುನ್ನಳ್ಳಿ ಇದ್ದರು.
ಸಮಿತಿಯ ಅರ್ಜುನ ಕಾಂಚೆ ಸಂಗಡಿಗರು ಹಾಡಿದರು. ಸೂರ್ಯಕಾಂತ ಬಡಿಗೇರ್ ಸ್ವಾಗತಿಸಿದರು. ಕರ್ನಾಟಕ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಅಂಬಾದಾಸ ಗಾಯಕವಾಡ ನಿರೂಪಿಸಿದರು. ರೇಖಾ ಕಾಂಚೆ ವಂದಿಸಿದರು.
ಮೇಲೆ ಮನುವಾದಿ ದೇಶದ್ರೋಹಿ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ್ದಾನೆ. ಇದರ ಹಿಂದೆ ಮನುವಾದಿಗಳ ದೊಡ್ಡ ಸಂದೇಶ ಇದೆ. ಇದನ್ನು ಪ್ರತಿಯೊಬ್ಬರೂ ವಿರೋಧಿಸಬೇಕುಭಾನುಪ್ರತಾಪ ಸಿಂಗ್, ಸುಪ್ರೀಂ ಕೋರ್ಟ್ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.