ADVERTISEMENT

ಹುಲಸೂರ: ಸಮಸ್ಯೆಗಳ ಮೂಟೆ ಹೊತ್ತ ಬೋಳೆಗಾಂವ

ಎಲ್ಲೆಂದರಲ್ಲಿ ಕಸದ ರಾಶಿ: ಮಳೆಗಾಲದಲ್ಲಿ ಕೆಸರುಮಯವಾಗಿ ಮಾರ್ಪಡುವ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:40 IST
Last Updated 12 ಸೆಪ್ಟೆಂಬರ್ 2025, 5:40 IST
ಬೋಳೆಗಾಂವ ಗ್ರಾಮದ ಹನುಮಾನ ದೇವಸ್ಥಾನದ ಬಳಿ ಬೆಳಕು ನೀಡದಿರುವ ಹೈಮಾಸ್ಟ್‌ ದೀಪ ಹಾಗೂ ಕೆಸರಿನಿಂದ ಆವರಿಸಿದ ರಸ್ತೆ
ಬೋಳೆಗಾಂವ ಗ್ರಾಮದ ಹನುಮಾನ ದೇವಸ್ಥಾನದ ಬಳಿ ಬೆಳಕು ನೀಡದಿರುವ ಹೈಮಾಸ್ಟ್‌ ದೀಪ ಹಾಗೂ ಕೆಸರಿನಿಂದ ಆವರಿಸಿದ ರಸ್ತೆ   

ಹುಲಸೂರ: ಸಮೀಪದ ಮೆಹಕರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳೆಗಾಂವ ಗ್ರಾಮದಲ್ಲಿ ಬೀದಿ ದೀಪದ ಕಂಬಗಳು ಇದ್ದರೂ ಅವುಗಳಿಗೆ ಬಹುದಿನಗಳಿಂದ ಬಲ್ಬ್‌ ಜೋಡಣೆ ಇಲ್ಲದ ಕಾರಣ ಸೂರ್ಯಾಸ್ತದ ನಂತರ ಜನರು ದಿನನಿತ್ಯ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.

ರಾತ್ರಿ ಸಮಯ ಬೆಳಕು ಇಲ್ಲದ್ದರಿಂದ ದಿನನಿತ್ಯ ಪದೇ ಪದೇ ಸರಣಿ ಅಪಘಾತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಹಾವು ಚೇಳುಗಳ ಭಯ: ಸ್ವಚ್ಛತೆ ಕಾಣದ ಚರಂಡಿ, ಅಭಿವೃದ್ಧಿಯನ್ನು ಕಾಣದ ರಸ್ತೆಗಳಿಂದ ಕೂಡಿದ ಗ್ರಾಮದ ಜನತೆ ಸಮಸ್ಯೆಗಳ ನಡುವೆಯೇ ಜೀವನ ಮಾಡುವಂತಾಗಿದೆ. ಕಳ್ಳಕಾಕರ ಭಯ ಒಂದುಕಡೆಯಾದರೆ, ಮತ್ತೊಂದು ಕಡೆ ವಿಷಜಂತುಗಳ ಕಾಟ. ಮಳೆಗಾಲ ಇರುವುದರಿಂದ ಕತ್ತಲಾದ ನಂತರ ಮನೆಯಿಂದ ಹೊರಗಡೆ ಹೋಗುವಂತಿಲ್ಲ. ಹೊರಗಡೆ ಕಾಲು ಇಟ್ಟರೆ ಎಲ್ಲಿ ಚೇಳು, ಹಾವು ಕಚ್ಚುತ್ತವೆ ಎಂಬ ಆತಂಕ ಇದೆ. ಈ ಬಗ್ಗೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ADVERTISEMENT

ತುಂಬಿ ತುಳುಕುತ್ತಿರುವ ಚರಂಡಿ: ಗ್ರಾಮದ ಹನುಮಾನ ದೇವಾಲಯದ ಮುಂಭಾಗದಲ್ಲಿನ ರಸ್ತೆ ಮೇಲೆ ಚರಂಡಿ ನೀರು ರಸ್ತೆಗೆ ಹಾದು ದೇವಾಲಯಕ್ಕೆ ಬರುವ ಭಕ್ತಾದಿಗಳು ಮೂಗು ಮುಚ್ಚಿಕೊಂಡು ಆಂಜನೇಯನ ದರ್ಶನ ಮಾಡುವ ಸ್ಥಿತಿಯಿದೆ. ಗ್ರಾಮದ ಚರಂಡಿಗಳು ಕಸಗಳಿಂದ ತುಂಬಿಕೊಂಡು ವರ್ಷಗಳೇ ಕಳೆದಿವೆ.

ಸೊಳ್ಳೆ ಕಾಟ, ಚರಂಡಿ ನೀರು ಸಮಸ್ಯೆ ಪರಿಹರಿಸಲು ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳು: ತಾಲ್ಲೂಕಿನಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ನಿರ್ವಹಣೆ ಇಲ್ಲದ ರಸ್ತೆಗಳಲ್ಲಿ ದೊಡ್ಡದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ವಾಹನ ಸವಾರರು ಪರದಾಡುವಂತಾಗಿದೆ. 

ಗ್ರಾಮದ ಪ್ರಮುಖರಾದ ಮಹೇಶ ಧಾಲೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಬೋಳೆಗಾಂವ ಗ್ರಾಮದಿಂದ ಸದಸ್ಯರು ಆಯ್ಕೆಯಾದರೂ ಸಮಸ್ಯೆ ಕುರಿತು ಧ್ವನಿ ಎತ್ತುವ ಆಸಕ್ತಿ ಅವರಿಗೆ ಇಲ್ಲ. ಯಾವ ಓಣಿಗೆ ಹೋದರೂ ಸ್ವಚ್ಛತೆ ಕಾಣುವುದಿಲ್ಲ. ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಮ್ಮ ಗ್ರಾಮಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೀದಿ ದೀಪ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ಪ್ರಮುಖರಾದ ಬಾಲಾಜಿ ಬುಳ್ಳಾ, ಸಂಗಮೇಶ ಬಿರಾದಾರ, ರಾಜಕುಮಾರ ಸ್ವಾಮಿ, ಸೂರಜ ಪಾಟೀಲ, ಮಹೇಶ ಮೂಲಗೆ, ಶಂಕರಯ್ಯ ಸ್ವಾಮಿ, ವಿಜಯಕುಮಾರ ಬುಳ್ಳಾ, ಸಂಜು ಮೇತ್ರೆ, ವಿಶಾಲ ಪಾಟೀಲ, ಶಿವಪುತ್ರ ಬಿರಾದಾರ, ರಾಜಕುಮಾರ ಮಲ್ಕ ಒತ್ತಾಯಿಸಿದ್ದಾರೆ.ಬೀದಿ ದೀಪಗಳಿಗೆ ಬಲ್ಬ್ ಅಳವಡಿಸಲು ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಬಲ್ಬ್ ಅಳವಡಿಸಲಾಗುವುದು ಹಾಗೂ ಚರಂಡಿ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಲಾಗುವುದು

ಗ್ರಾಮದ ರಸ್ತೆಯಲ್ಲಿ ಗುಂಡಿಗಳು ಬಿದ್ದು ಮಳೆಯ ನೀರು ಸಂಗ್ರಹವಾಗಿದೆ
ಗ್ರಾಮದ ಚರಂಡಿಗಳಲ್ಲಿ ನಿಂತ ನೀರಿನಿಂದ ದುರ್ವಾಸನೆ ಜೊತೆ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ರೋಗ ರುಜಿನಗಳು ಹರಡುವ ಸಂಭವವಿದೆ
ಬಾಲಾಜಿ ಬೋಳೆಗಾಂವೆ ಗ್ರಾಮಸ್ಥ
ಬೀದಿ ದೀಪಗಳಿಗೆ ಬಲ್ಬ್ ಅಳವಡಿಸಲು ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಬಲ್ಬ್ ಅಳವಡಿಸಲಾಗುವುದು ಹಾಗೂ ಚರಂಡಿ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಲಾಗುವುದು
ಪ್ರಲ್ಹಾದ ಪ್ರಭಾರ ಪಿಡಿಒ ಮೇಹಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.