ಬೀದರ್: ಇಲ್ಲಿನ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷರಾಗಿ ಅಮರಕುಮಾರ್ ಖಂಡ್ರೆ, ಉಪಾಧ್ಯಕ್ಷರಾಗಿ ಅಭಿಷೇಕ್ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಮರಕುಮಾರ್ ಖಂಡ್ರೆ ಹಾಗೂ ಅಭಿಷೇಕ್ ಪಾಟೀಲ ಅವರು ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇಬ್ಬರನ್ನು ಹೊರತುಪಡಿಸಿ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಚುನಾವಣಾಧಿಕಾರಿ ಲವೀಶ್ ಒರ್ಡಿಯಾ ಅವರು ಘೋಷಿಸಿದರು.
ಬಿಡಿಸಿಸಿ ಬ್ಯಾಂಕಿನ 15 ನಿರ್ದೇಶಕರ ಸ್ಥಾನಗಳಿಗೆ ಅಕ್ಟೋಬರ್ 4ರಂದು ಚುನಾವಣೆ ನಡೆದಿತ್ತು. ಅದರಲ್ಲಿ ಅಮರಕುಮಾರ್ ಖಂಡ್ರೆ ಪೆನಾಲ್ನಿಂದ ಹತ್ತು ಜನ, ಪ್ರತಿಸ್ಪರ್ಧಿ ಉಮಾಕಾಂತ ನಾಗಮಾರಪಳ್ಳಿ ಪೆನಾಲ್ನ ಐದು ಜನ ಆಯ್ಕೆಯಾಗಿದ್ದರು. ಆಗಲೇ ಖಂಡ್ರೆ ಪೆನಾಲ್ನವರು ಆಡಳಿತದ ಚುಕ್ಕಾಣಿ ಹಿಡಿಯುವುದು ಖಚಿತವಾಗಿತ್ತು.
ಅಮರಕುಮಾರ್ ಖಂಡ್ರೆಯವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ಕಿರಿಯ ಸಹೋದರ. ಇನ್ನು, ಅಭಿಷೇಕ್ ಪಾಟೀಲ ಅವರು ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್ ಅವರ ಮಗ. ಅಭಿಷೇಕ್ ಪಾಟೀಲ ಅವರಿಗೆ ಸರ್ಕಾರ ನಾಮನಿರ್ದೇಶನ ಮಾಡಿತ್ತು. ಚುನಾವಣೆಗೂ ಮುನ್ನ ನಡೆದ ಮಾತುಕತೆಯಂತೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡಲಾಗಿದೆ. ಇದರೊಂದಿಗೆ ಡಿಸಿಸಿ ಬ್ಯಾಂಕಿನಲ್ಲಿ ಕಳೆದ 38 ವರ್ಷಗಳಿಂದ ನಿಯಂತ್ರಣ ಹೊಂದಿದ್ದ ನಾಗಮಾರಪಳ್ಳಿ ಕುಟುಂಬದ ಅಧಿಕಾರಕ್ಕೆ ತೆರೆ ಬಿದ್ದಿದೆ.
ಸರ್ಕಾರ ನನ್ನ ಮೇಲೆ ಭರವಸೆ ಇಟ್ಟು ಬ್ಯಾಂಕಿಗೆ ನಾಮನಿರ್ದೇಶನ ಮಾಡಿದೆ. ಎಲ್ಲರೂ ನನ್ನ ಮೇಲೆ ವಿಶ್ವಾಸವಿಟ್ಟು ಉಪಾಧ್ಯಕ್ಷರಾಗಿ ಮಾಡಿದ್ದು, ಅವರ ನಿರೀಕ್ಷೆಯಂತೆ ಕೆಲಸ ಮಾಡುವೆ.–ಅಭಿಷೇಕ್ ಪಾಟೀಲ, ನೂತನ ಉಪಾಧ್ಯಕ್ಷ, ಡಿಸಿಸಿ ಬ್ಯಾಂಕ್
ಹತ್ತು ವರ್ಷ ಡಿಸಿಸಿ ಬ್ಯಾಂಕಿನಲ್ಲಿ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನನ್ನದೇ ಆದ ಅನೇಕ ಯೋಚನೆಗಳಿದ್ದು, ಅವುಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುವೆ.–ಅಮರಕುಮಾರ್ ಖಂಡ್ರೆ, ನೂತನ ಅಧ್ಯಕ್ಷ, ಡಿಸಿಸಿ ಬ್ಯಾಂಕ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.