ಬಸವಕಲ್ಯಾಣ: ‘ಸಕಲರ ಕಲ್ಯಾಣವೇ ಧರ್ಮದ ಧ್ಯೇಯವಾಗಿದೆ. ಪ್ರತಿಯೊಬ್ಬರೂ ಧರ್ಮ ಸಂಸ್ಕಾರ ಪಡೆಯುವುದು ಅತ್ಯಂತ ಅಗತ್ಯ’ ಎಂದು ಉಪನ್ಯಾಸಕಿ ಭುವನೇಶ್ವರಿ ಶ್ರೀವಾಸ್ತವ ಹೇಳಿದರು.
ನಗರದ ತ್ರಿಪುರಾಂತ ಗವಿಮಠದಲ್ಲಿ ಶುಕ್ರವಾರ ನಡೆದ ಸಿದ್ಧಾಂತ ಶಿಖಾಮಣಿ ಮತ್ತು ವಚನ ಸಾಹಿತ್ಯ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದಿನ ಒತ್ತಡದ ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ಪಡೆಯಲು ಗುರುಗಳ ಮಾರ್ಗದರ್ಶನ ಅಗತ್ಯವಾಗಿದೆ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಅಲ್ಪ ಕಾಲದಲ್ಲಿಯೇ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ಎತ್ತಿದ ಕೈ ಎನಿಸಿಕೊಂಡಿರುವುದು ಸಂತಸ ತಂದಿದೆ’ ಎಂದರು.
ತಾಲ್ಲೂಕು ಟೋಕರಿ ಕೋಲಿ ಸಮಾಜ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಹೊಸಮನಿ ಮಾತನಾಡಿ, ‘ಮೊಬೈಲ್ ಹಾಗೂ ಆಧುನಿಕ ಸೌಕರ್ಯಗಳ ಮಧ್ಯೆ ಮುಳುಗಿರುವ ಜೀವನದಲ್ಲಿ ತೃಪ್ತಿ ಸಿಗುವಂತಾಗಲು ಶರಣರ, ಸಂತರ, ಸತ್ಪುರುಷರ ತತ್ವ ಸಿದ್ಧಾಂತ ಪಾಲನೆ ಅಗತ್ಯ’ ಎಂದು ಹೇಳಿದರು.
ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶಿಕ್ಷಕಿ ಸರಸ್ವತಿ ಬೆಂಬಳಗೆ, ಸವಿತಾ ಸ್ವಾಮಿ, ಅಕ್ಷತಾ ಮಠಪತಿ, ಶರಣಬಸಪ್ಪ ಆಲಗೂಡೆ ಮಾತನಾಡಿದರು. ಸುರೇಖಾ ಸಜ್ಜನಶೆಟ್ಟಿ ಉಪಸ್ಥಿತರಿದ್ದರು.
ವಿಶೇಷ ಸನ್ಮಾನ: ನಂತರ ಹಮ್ಮಿಕೊಂಡಿದ್ದ 9ನೇ ವಿಶೇಷ ಉಪನ್ಯಾಸದಲ್ಲಿ ಹಿರಿಯರಾದ ಸುಭದ್ರಾಬಾಯಿ ವೀರಯ್ಯ ಸ್ವಾಮಿ ಅವರನ್ನು ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸನ್ಮಾನಿಸಿದರು.
ಪ್ರೊ.ರುದ್ರೇಶ್ವರ ಗೋರಟಾ, ಮುಖಂಡರಾದ ಅಮರ ಬಡದಾಳೆ, ಲೋಕೇಶ ಮೋಳಕೆರೆ, ಶರಣಬಸಪ್ಪ ಅಲಗೂಡೆ, ಕಲ್ಪನಾ ಶೀಲವಂತ ಮಾತನಾಡಿದರು. ಶ್ರೀಶೈಲ್ ವಾತಡೆ, ಮಲ್ಲಿಕಾರ್ಜುನ ಆಲಗೂಡೆ ಉಪಸ್ಥಿತರಿದ್ದರು. ಬೆಳದಿಂಗಳ ಸಹಭೋಜನ ಸಹ ಆಯೋಜಿಸಲಾಗಿತ್ತು. ಭಕ್ತರು ಮನೆಗಳಿಂದ ಊಟ ತೆಗೆದುಕೊಂಡು ಬಂದು ಸಾಮೂಹಿಕವಾಗಿ ಭೋಜನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.