ಬೀದರ್: ಜಿಲ್ಲಾಡಳಿತದಿಂದ ನಗರದ ಬಹಮನಿ ಕೋಟೆಯ ಆಗಸದ ಮೇಲೆ ಶುಕ್ರವಾರ ಏರ್ಪಡಿಸಿದ್ದ ಸೂರ್ಯಕಿರಣ ‘ಏರೋಬ್ಯಾಟಿಕ್’ ತಂಡದ ವೈಮಾನಿಕ ಪ್ರದರ್ಶನ ಮಳೆಯ ಕಾರಣಕ್ಕೆ ರದ್ದುಪಡಿಸಲಾಯಿತು.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಆಗಾಗ ತುಂತುರು ಮಳೆಯಾಗುತ್ತಿತ್ತು. ಸಂಜೆಯವರೆಗೆ ಇದೇ ತರಹದ ವಾತಾವರಣ ಇರಲಿದೆ ಎಂದು ಅರಿತ ಜಿಲ್ಲಾಡಳಿತವು ಕಾರ್ಯಕ್ರಮವನ್ನು ರದ್ದುಪಡಿಸಿತು.
‘ಶುಕ್ರವಾರ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗಾಗಿಯೇ ‘ಏರ್ ಶೋ’ ಏರ್ಪಡಿಸಲಾಗಿತ್ತು. ಆದರೆ, ಮಳೆಯಿಂದ ಕಾರ್ಯಕ್ರಮ ನಡೆದಿಲ್ಲ. ಶನಿವಾರ (ಸೆ.9) ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4ಕ್ಕೆ ಏರ್ ಶೋ ನಡೆಯಲಿದ್ದು, ಮುಂಚಿತವಾಗಿಯೇ ಎಲ್ಲರೂ ಕೋಟೆ ಆವರಣದೊಳಗೆ ಸೇರಬೇಕು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಇನ್ನೂ ಎರಡ್ಮೂರು ದಿನಗಳವರೆಗೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ, ಮಳೆಯಾಗಲಿದೆ. ಶುಕ್ರವಾರದಂತೆ ಶನಿವಾರವೂ ಮಳೆಯಾದರೆ ಕಾರ್ಯಕ್ರಮ ರದ್ದಾಗುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.