ಬೀದರ್: ನಗರ ಸೇರಿದಂತೆ ಜಿಲ್ಲೆಯ ಹಲವೆಡೆಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.
ಬೆಳಿಗ್ಗೆಯಿಂದ ಮಧ್ಯಾಹ್ನದ ಆಕಾಶ ಶುಭ್ರವಾಗಿತ್ತು. ಮಧ್ಯಾಹ್ನ ದಟ್ಟ ಕಾರ್ಮೋಡ ಕವಿದು, ಬಿರುಸಿನ ಮಳೆಯಾಯಿತು. ಆನಂತರ ಬಿಟ್ಟು ಬಿಟ್ಟು ರಾತ್ರಿ ವರೆಗೆ ಜಿಟಿಜಿಟಿ ಮಳೆ ಸುರಿಯಿತು. ನಡು ನಡುವೆ ಜೋರಾಗಿ ವರ್ಷಧಾರೆಯಾಯಿತು. ಇದರಿಂದಾಗಿ ವಾತಾವರಣ ಸಂಪೂರ್ಣ ತಂಪಾಯಿತು.
ಸತತ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಸಂಜೆ ನಂತರ ಹೊರಗೆ ಜನರ ಓಡಾಟ ಹೆಚ್ಚಿಗೆ ಇರಲಿಲ್ಲ. ನಗರದ ಮನ್ನಳ್ಳಿ ರಸ್ತೆ, ಹಾರೂರಗೇರಿ ಕಮಾನ್, ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ಸೇರಿದಂತೆ ಹಲವೆಡೆಗಳಲ್ಲಿ ರಸ್ತೆಯಲ್ಲಿ ಅಪಾರ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸವಾರರು ಪರದಾಟ ನಡೆಸಿದರು. ಪ್ರಮುಖ ವೃತ್ತಗಳಲ್ಲಿ ಸಂಜೆ ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸಿದ ಪರಿಣಾಮ ಜನ ಸಮಸ್ಯೆ ಅನುಭವಿಸಿದರು.
ಬೀದರ್ ತಾಲ್ಲೂಕಿನ ಮರಕಲ್, ಚಿಕ್ಕಪೇಟೆ, ಮಾಮನಕೇರಿ, ಬೆನಕನಳ್ಳಿ, ಜನವಾಡ, ಶಹಾಪುರ ಗೇಟ್, ಮಲ್ಕಾಪೂರ, ಗೋರನಳ್ಳಿ, ಚಿಟ್ಟಾ, ಘೋಡಂಪಳ್ಳಿ, ಅಮಲಾಪೂರ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.
ಜಿಲ್ಲೆಯ ಭಾಲ್ಕಿ, ಹುಲಸೂರ, ಹುಮನಾಬಾದ್, ಚಿಟಗುಪ್ಪದಲ್ಲೂ ಉತ್ತಮ ಮಳೆಯಾಗಿದೆ. ಮಂಗಳವಾರವೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.