ADVERTISEMENT

ಬೀದರ್‌ ಕಾರ್ಪೊರೇಶನ್‌ಗೆ 344 ಹೊಸ ಹುದ್ದೆ

ಹುದ್ದೆಗಳ ಸೃಜನೆಗೆ ಮಂಜೂರಾತಿ ನೀಡಿದ ಆರ್ಥಿಕ ಇಲಾಖೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಆಗಸ್ಟ್ 2025, 6:48 IST
Last Updated 1 ಆಗಸ್ಟ್ 2025, 6:48 IST
ಬೀದರ್‌ ನಗರಸಭೆ ಕಚೇರಿ
ಬೀದರ್‌ ನಗರಸಭೆ ಕಚೇರಿ   

ಬೀದರ್‌: ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದ ಬೆನ್ನಲ್ಲೇ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಕಾರ್ಪೊರೇಶನ್‌ ಅಸ್ತಿತ್ವಕ್ಕೆ ಬೇಕಾದ ಅಗತ್ಯ ಪ್ರಕ್ರಿಯೆ ಇನ್ನಷ್ಟು ಚುರುಕುಗೊಂಡಿದೆ.

ಬೀದರ್‌ ನಗರಸಭೆಗೆ ಈ ಹಿಂದೆ ಮಂಜೂರಾದ ಹುದ್ದೆಗಳ ಜೊತೆಗೆ ಷರತ್ತಿಗೊಳಪಟ್ಟು ವಿವಿಧ ವೃಂದಗಳ 344 ಹೊಸ ಹುದ್ದೆಗಳನ್ನು ಸೃಜಿಸಿ ಮಂಜೂರು ಮಾಡಲಾಗಿದೆ. ಸದ್ಯ ಕಾಯಂ ಹಾಗೂ ಹೊರಗುತ್ತಿಗೆಯಡಿ 470 ಜನ ಕೆಲಸ ನಿರ್ವಹಿಸುತ್ತಿದ್ದಾರೆ.

ಆಡಳಿತಕ್ಕಾಗಿ ಒಂದು ಹಾಗೂ ಇತರೆ ಉದ್ದೇಶಕ್ಕಾಗಿ ಎರಡು ಸೇರಿದಂತೆ ಒಟ್ಟು ಮೂರು ಉಪ ಆಯುಕ್ತರು, ಮುಖ್ಯ ಲೆಕ್ಕಾಧಿಕಾರಿ, ನಗರ ಯೋಜನಾ ಅಧಿಕಾರಿ ಸೇರಿದಂತೆ ಒಟ್ಟು 344 ಹುದ್ದೆಗಳು ಹೊಸದಾಗಿ ಸೇರ್ಪಡೆಯಾಗಲಿವೆ. ಎಲ್ಲ ಹುದ್ದೆಗಳ ನೇಮಕಾತಿಗೆ ಷರತ್ತು ವಿಧಿಸಲಾಗಿದೆ.

ADVERTISEMENT

ಪಾಲಿಕೆಗೆ ಅಗತ್ಯವಿರುವ ಹುದ್ದೆಗಳಿಗೆ ನಿಯೋಜನೆ ಮೂಲಕ ಪಡೆಯತಕ್ಕದ್ದು. ಮುಂದಿನ ಮೂರು ವರ್ಷಗಳ ವರೆಗೆ ಯಾವುದೇ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳತಕ್ಕದ್ದಲ್ಲ. ಪಾಲಿಕೆಯ ಸ್ವಂತ ಸಂಪನ್ಮೂಲದಿಂದ ವೆಚ್ಚವನ್ನು ಭರಿಸುವ ಮೂಲಕ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲವನ್ನು ನೇಮಿಸಿಕೊಳ್ಳಬಹುದು. ಪಾಲಿಕೆಯ ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಪೌರಾಡಳಿತ ನಿರ್ದೇಶನಾಲಯವು ಪಾಲಿಕೆಗೆ ವೆಚ್ಚವನ್ನು ಭರಿಸಲು ಅನುಮತಿ ನೀಡಬಹುದು ಎಂದು ಷರತ್ತಿನಲ್ಲಿ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

ಬೀದರ್‌ ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿಯ 16 ಗ್ರಾಮಗಳಿಗೆ ಸಂಬಂಧಿಸಿದ ಕಡತಗಳನ್ನು ಈಗಾಗಲೇ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದ್ದು, ಈ ಗ್ರಾಮಗಳು ಅಧಿಕೃತವಾಗಿ ಸೇರ್ಪಡೆಯಾಗಿವೆ.

ಶಿವರಾಜ ರಾಠೋಡ್‌

Highlights - ಅಂಕಿ ಅಂಶ * 06 ಗ್ರಾಮ ಪಂಚಾಯಿತಿ * 16 ಗ್ರಾಮಗಳು

10 ಎಕರೆಯಲ್ಲಿ ಹೊಸ ಕಟ್ಟಡ

ಬೀದರ್‌ ಮಹಾನಗರ ಪಾಲಿಕೆಯ ಕಟ್ಟಡ ನಿರ್ಮಾಣಕ್ಕೆ ಹೈದರಾಬಾದ್‌ ರಸ್ತೆಯ ನೂರ್‌ ಕಾಲೇಜು ಎದುರಿಗೆ 10 ಎಕರೆ ಜಾಗ ಮೀಸಲಿಡಲಾಗಿದೆ. ₹20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು ಅದಕ್ಕೆ ಸರ್ಕಾರದಿಂದ ಅನುಮೋದನೆ ಸಿಗಬೇಕಿದೆ. ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಶಿಥಿಲಗೊಂಡಿದ್ದು ಈಗಾಗಲೇ ಅಲ್ಲಿನ ಎಲ್ಲ ಕಚೇರಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಇದಕ್ಕೆ ಹೊಂದಿಕೊಂಡಿರುವ ಮಹಾನಗರ ಪಾಲಿಕೆ (ಬೀದರ್‌ ನಗರಸಭೆ) ಕಟ್ಟಡ ಕೂಡ ಇಷ್ಟರಲ್ಲೇ ಸ್ಥಳಾಂತರವಾಗಲಿದೆ. ‘ಈಗ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿಗೆ ಬಂದು ತೆರಿಗೆ ಪಾವತಿಸುತ್ತಾರೆ. ಹಾಗಾಗಿ ಸದ್ಯ ಕಚೇರಿ ಬೇರೆಡೆಗೆ ಸ್ಥಳಾಂತರಿಸಿಲ್ಲ. ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ತೆರವು ಕೆಲಸ ಆರಂಭವಾದಾಗ ಪಾಲಿಕೆ ಕಟ್ಟಡ ಕೂಡ ತೆರವು ಮಾಡಲಾಗುತ್ತದೆ. ನಮಗೆ ಸೇರಿದ 10 ಎಕರೆ ಜಾಗವಿದ್ದು ₹20 ಕೋಟಿಯ ಪ್ರಸ್ತಾವ ಸಲ್ಲಿಸಲಾಗಿದೆ. ಅದು ನಿರ್ಮಾಣವಾಗುವವರೆಗೆ ತಾತ್ಕಾಲಿಕವಾದ ಕಟ್ಟಡದಲ್ಲಿ ಕೆಲಸ ನಿರ್ವಹಿಸಲಾಗುವುದು. ಮಹಾನಗರ ಪಾಲಿಕೆಗೆ ಯಾವ್ಯಾವ ಹುದ್ದೆಗಳು ಬೇಕು ಎಂಬುದನ್ನು ಗುರುತಿಸಿ ಆರ್ಥಿಕ ಇಲಾಖೆಯು ಪಟ್ಟಿ ಮಾಡಿ ಮಂಜೂರಾತಿ ನೀಡಿದೆ. ಇನ್ನಷ್ಟೇ ನೇಮಕ ಪ್ರಕ್ರಿಯೆ ಆಗಬೇಕಿದೆ’ ಎಂದು ಪೌರಾಯುಕ್ತ ಶಿವರಾಜ ರಾಠೋಡ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.