ಬೀದರ್: ಶಾಹೀನ್ ಶಾಲಾ ಮಕ್ಕಳು ಪ್ರದರ್ಶಿಸಿದ ವಿವಾದಾತ್ಮಕ ನಾಟಕಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಪ್ರಕರಣ ದಾಖಲಾದ ನಂತರ ಸೌದಿ ಅರೇಬಿಯಾಕ್ಕೆ ತೆರಳಿದ್ದ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಗುರುವಾರ ಬೆಳಗಿನ ಜಾವ ನಗರಕ್ಕೆ ಬಂದು ಪೊಲೀಸ್ ತನಿಖಾ ಅಧಿಕಾರಿಯ ಮುಂದೆ ಹಾಜರಾದರು.
ಅಬ್ದುಲ್ ಖದೀರ್ ಅವರು ತನಿಖಾ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಂಯಮದಿಂದ ಉತ್ತರಿಸಿದರು.
ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯವು ಮಾ.3ರಂದು ನೀಡಿದ ನಿರೀಕ್ಷಣಾ ಜಾಮೀನು ನಂತರದ ಪ್ರಕ್ರಿಯೆಗಳನ್ನು ಪೊಲೀಸರು ಪೂರ್ಣಗೊಳಿಸಿದರು. ಮೂವರು ಗಣ್ಯರ ಶ್ಯೂರಿಟಿ ಹಾಗೂ ಮುಚ್ಚಳಿಕೆಯನ್ನು ಬರೆಯಿಸಿಕೊಂಡರು.
ಇದಕ್ಕೂ ಮೊದಲು ಬೀದರ್ ಪೊಲೀಸರ ತಂಡವು ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ನ್ಯಾಯಾಲಯದ ಆದೇಶ ಪ್ರತಿ ಹಾಗೂ ಲುಕ್ಔಟ್ ನೋಟಿಸ್ ರದ್ದುಪಡಿಸುವ ಪತ್ರವನ್ನು ಸಲ್ಲಿಸಿತು. ಪ್ರಾಧಿಕಾರದ ಅಧಿಕಾರಿಗಳು ನಿರ್ಬಂಧ ತೆರವುಗೊಳಿಸಿದ ನಂತರ ಪೊಲೀಸ್ ಅಧಿಕಾರಿಗಳು ಅಬ್ದುಲ್ ಖದೀರ್ ಅವರೊಂದಿಗೆ ವಿಮಾನದ ಮೂಲಕ ಹೈದರಾಬಾದ್ಗೆ ಬಂದರು. ಅಲ್ಲಿಂದ ನೇರವಾಗಿ ಅವರನ್ನು ನಗರದ ಡಿವೈಎಸ್ಪಿ ಕಚೇರಿಗೆ ಕರೆ ತಂದು ಕೆಲ ಮಾಹಿತಿ ಪಡೆದ ನಂತರ ಮನೆಗೆ ಕಳಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.