ಶಿವಪುರ (ಬಸವಕಲ್ಯಾಣ): ‘ಬಿಜೆಪಿಯಿಂದ ನನಗೆ ಟಿಕೆಟ್ ಸಿಗಬೇಕು ಎಂಬುದು ಮತದಾರರ ನಿರೀಕ್ಷೆ ಆಗಿತ್ತು. ಇದಕ್ಕಾಗಿ ಹಲವರು ಹರಕೆ ಹೊತ್ತಿದ್ದರು. ಪಾದಯಾತ್ರೆ ನಡೆಸಿದರು. ಅದು ಈಡೇರಿದ್ದು ಈಗ ಬಹುಮತದಿಂದ ಗೆಲ್ಲಿಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ’ ಎಂದು ಬಿಜೆಪಿ ಅಭ್ಯರ್ಥಿ ಶರಣು ಸಲಗರ ಹೇಳಿದ್ದಾರೆ.
ತಾಲ್ಲೂಕಿನ ಶಿವಪುರದಲ್ಲಿ ಶುಕ್ರವಾರ ಆಯೋಜಿಸಿದ್ದ ಉಪ ಚುನಾವಣೆಯ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಬಿಜೆಪಿಯ ತತ್ವ, ಸಿದ್ಧಾಂತಗಳು ಎಲ್ಲರಿಗೂ ಇಷ್ಟವಾಗುತ್ತಿವೆ. ಉತ್ತಮ ಆಡಳಿತ ನೋಡಿ ಅನೇಕರು ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ನಾನು ನುಡಿದಂತೆ ನಡೆಯುವವನು. ನೀವು ಇಟ್ಟಿರುವ ನಂಬಿಕೆಗೆ ದ್ರೋಹ ಬಗೆಯುವುದಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ನಾನು ಗೆದ್ದರೆ ಅನುಕೂಲ ಆಗುತ್ತದೆ’ ಎಂದರು. ಅನಿಲ ಸ್ವಾಮಿ, ರಾಜರೆಡ್ಡಿ, ಸಂಜೀವ ಸುಗೂರೆ, ಶಾಂತಯ್ಯ ಸ್ವಾಮಿ, ಸಂಜೀವ ರಾಜೋಳೆ, ವಿದ್ಯಾಸಾಗರ ಮೂಲಗೆ, ಷಣ್ಮುಖಯ್ಯ ಸ್ವಾಮಿ, ಸಂಜೀವಕುಮಾರ ಪಾಟೀಲ, ತುಕಾರಾಮ ಬಿರಾದಾರ, ರಾಮಲಿಂಗ ಏಕಂಬೆ, ವಿವೇಕಾನಂದ ಮಠಪತಿ ಪಾಲ್ಗೊಂಡಿದ್ದರು. ಕಿಟ್ಟಾ, ಘಾಟಹಿಪ್ಪರ್ಗಾ, ಏಕಲೂರ ಹಾಗೂ ಇಲ್ಲಾಳ ಗ್ರಾಮಗಳಲ್ಲೂ ಪ್ರಚಾರ ಸಭೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.