ಬಸವಕಲ್ಯಾಣ: ನಗರದಲ್ಲಿ ಗುರುವಾರ ಬಹಿರಂಗ ಪ್ರಚಾರದ ಅಂತಿಮ ದಿನ ಬೃಹತ್ ರೋಡ್ ಶೋ ನಡೆಸುವ ಮೂಲಕ ಈ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರ ಮತಯಾಚಿಸಲಾಯಿತು.
ತೇರು ಮೈದಾನದಿಂದ ಆರಂಭಗೊಂಡ ರೋಡ್ ಶೋ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಹರಳಯ್ಯ ವೃತ್ತ, ಶಿವಾಜಿ ಪಾರ್ಕ್, ಮಡಿವಾಳ ಮಾಚಿದೇವರ ವೃತ್ತದ ಮೂಲಕ ತ್ರಿಪುರಾಂತ ಹನುಮಾನ ದೇವಸ್ಥಾನದವರೆಗೆ ನಡೆಯಿತು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ ಕಟೀಲ್, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಸಂಸದರಾದ ಭಗವಂತ ಖೂಬಾ, ಉಮೇಶ ಜಾಧವ, ಅಭ್ಯರ್ಥಿ ಶರಣು ಸಲಗರ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು, ಮಾಜಿ ಶಾಸಕ ಎಂ.ಜಿ.ಮುಳೆ, ದಲಿತ ಮುಖಂಡ ರವೀಂದ್ರ ಗಾಯಕವಾಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗುಂಡುರೆಡ್ಡಿ, ಅಣ್ಣಾರಾವ್ ರಾಠೋಡ ಇವರೆಲ್ಲ ತೆರೆದ ವಾಹನದಲ್ಲಿ ನಿಂತು ಜನರತ್ತ ಕೈ ಬೀಸಿದರು. ಕೈ ಜೋಡಿಸಿ ಮತ ನೀಡುವಂತೆ ಕೇಳಿಕೊಂಡರು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಒಳಗೊಂಡು ಅನೇಕರು ಕೈಯಲ್ಲಿ ಬಿಜೆಪಿ ಧ್ವಜಗಳನ್ನು ಹಿಡಿದಿದ್ದರು. ಕೆಲವರು ಕೇಸರಿ ಟವೆಲ್ಗಳನ್ನು ಕೊರಳಲ್ಲಿ ಹಾಕಿಕೊಂಡಿದ್ದರು.
ಬಿಜೆಪಿಗೆ ಜಯವಾಗಲಿ, ಶರಣು ಸಲಗರಗೆ ಜಯವಾಗಲಿ, ಬಿಜೆಪಿಗೆ ಮತ ದೇಶಕ್ಕೆ ಹಿತ ಎಂಬಿತ್ಯಾದಿ ಘೋಷಣೆಗಳನ್ನು ಕೂಡ ಕೂಗಿದರು. ಮೋದಿ ಮೋದಿ ಎನ್ನುತ್ತ ಯುವಕರು ಧ್ವಿನಿವರ್ಧಕದ ಸದ್ದಿಗೆ ಕುಣಿಯುತ್ತಿರುವುದು ಕೂಡ ಕಂಡುಬಂದಿತು. ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.