ADVERTISEMENT

ಸಚಿವ ಪ್ರಭು ಚವಾಣ್ ಜನ್ಮದಿನ ಆಚರಣೆ: ಅಭಿಮಾನಿಗಳಿಂದ ರಕ್ತದಾನ, ಸಸಿ ನೆಡುವಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 13:25 IST
Last Updated 6 ಜುಲೈ 2020, 13:25 IST
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರ ಜನ್ಮದಿನದ ಪ್ರಯುಕ್ತ ರಕ್ತದಾನ ಮಾಡಿದ ವ್ಯಕ್ತಿಗೆ ಔರಾದ್ ತಾಲ್ಲೂಕಿನ ಚಿಂತಾಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರ ಜನ್ಮದಿನದ ಪ್ರಯುಕ್ತ ರಕ್ತದಾನ ಮಾಡಿದ ವ್ಯಕ್ತಿಗೆ ಔರಾದ್ ತಾಲ್ಲೂಕಿನ ಚಿಂತಾಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು   

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರ ಜನ್ಮದಿನವನ್ನು ಅಭಿಮಾನಿಗಳು ಜಿಲ್ಲೆಯ ವಿವಿಧೆಡೆ ಸೋಮವಾರ ರಕ್ತದಾನ, ಸಸಿ ನೆಡುವಿಕೆ, ಗೋವುಗಳಿಗೆ ಮೇವು, ಪೌಷ್ಠಿಕ ಆಹಾರ ವಿತರಣೆ ಹಾಗೂ ಸ್ವಚ್ಛತಾ ಅಭಿಯಾನ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ಬಿಜೆಪಿ ನಗರ ಘಟಕದ ವತಿಯಿಂದ ನಗರದ ಗುಂಪಾದ ಚನ್ನಬಸವೇಶ್ವರ ಉದ್ಯಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಸಸಿ ನೆಡಲಾಯಿತು. ರಾಂಪುರೆ ಕಾಲೊನಿಯ ಧ್ಯಾನ ಮಂದಿರದ ಗೋಶಾಲೆಯಲ್ಲಿ ಹಸುಗಳಿಗೆ ಮೇವು ದೇಣಿಗೆ ರೂಪದಲ್ಲಿ ಕೊಡಲಾಯಿತು.

ಬಿಜೆಪಿ ಬೀದರ್ ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಗ್ರಾಮಾಂತರ ಘಟಕದ ಅಧ್ಯಕ್ಷ ರಾಜೇಂದ್ರ ಪೂಜಾರಿ, ಮುಖಂಡರಾದ ಶಶಿ ಹೊಸಳ್ಳಿ, ಗುರುನಾಥ ರಾಜಗೀರಾ ಇದ್ದರು.

ADVERTISEMENT

ಸಚಿವರಿಂದ ಗೋವು ದತ್ತು: ತಮ್ಮ ಜನ್ಮದಿನದ ಅಂಗವಾಗಿ ಸಚಿವ ಚವಾಣ್ ಅವರು ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆಯಲ್ಲಿನ ಒಂದು ಗೋವು ದತ್ತು ಪಡೆದಿದ್ದಾರೆ. ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಶಿವಕುಮಾರ ಕಟ್ಟೆ ಜ್ಯೋತಿರ್ಮಯಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ದತ್ತು ಪ್ರಕ್ರಿಯೆ ಪೂರ್ಣಗೊಳಿಸಿದರು. ಗೋಶಾಲೆಯಲ್ಲಿ ಇರುವ ಎಲ್ಲ ಗೋವುಗಳಿಗೆ ವಿತರಿಸಲು 50 ಕೆ.ಜಿ. ಮಿನರಲ್ ಮಿಕ್ಸ್‌ಚರ್‌ ಹಾಗೂ 10 ಬ್ಯಾಗ್ ಲವಣ ಮಿಶ್ರಣ ಪೌಷ್ಟಿಕ ಆಹಾರ ನೀಡಲಾಯಿತು.

ಔರಾದ್, ಕಮಲನಗರ ತಾಲ್ಲೂಕಿನ ಸಂತಪುರ, ದಾಬಕಾ, ಚಿಂತಾಕಿ, ವಡಗಾಂವ, ಕುಶನೂರು ವಲಯದ ಗ್ರಾಮಗಳಲ್ಲಿ ಶಾಲೆ ಆವರಣದಲ್ಲಿ ಸಸಿ ನೆಡಲಾಯಿತು. ಚಿಂತಾಕಿಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 14 ಮಂದಿ ಅಭಿಮಾನಿಗಳು ರಕ್ತದಾನ ಮಾಡಿದರು.

ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಜಿಲ್ಲೆಯ 109 ಪಶು ಚಿಕಿತ್ಸಾಲಯಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಔರಾದ್‍ನ ನಿರ್ಮಾಣ ಹಂತದಲ್ಲಿ ಇರುವ ಸೇವಾಲಾಲ ಭವನ ಹಾಗೂ ಶಾಸಕರ ಕಚೇರಿ ಆವರಣದಲ್ಲಿ ಸಸಿ ನೆಡುವ ಹಾಗೂ ಮಾಸ್ಕ್ ವಿತರಣೆ ಕಾರ್ಯಕ್ರಮ ಜರುಗಿತು. ಆದರ್ಶ ವಿದ್ಯಾಲಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಕೊರೊನಾ ಸೋಂಕಿನ ಕಾರಣ ಈ ಬಾರಿ ತಮ್ಮ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಶುಭಾಶಯ ಕೋರುವ ಫ್ಲೆಕ್ಸ್ಗಳನ್ನು ಅಳವಡಿಸಬಾರದು. ದುಂದುವೆಚ್ಚ ಮಾಡಬಾರದು. ರಕ್ತದಾನ, ಸಸಿ ನೆಡುವಿಕೆ ಮೊದಲಾದ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಚವಾಣ್ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.