ಭಾಲ್ಕಿ: ತಾಲ್ಲೂಕಿನ ಹಾಲಹಿಪ್ಪರ್ಗಾ ಗ್ರಾಮದಲ್ಲಿ ಬೋಮಗೊಂಡೇಶ್ವರ ನೂತನ ಮೂರ್ತಿಯನ್ನು ಶಾಸಕ ಈಶ್ವರ ಖಂಡ್ರೆ ಅನಾವರಣಗೊಳಿಸಿದರು.
ಬೋಮಗೊಂಡೇಶ್ವರರು ಮನುಕುಲದ ಉದ್ಧಾರಕ್ಕೆ ಶ್ರಮಿಸಿದ್ದರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಅವರು ಸಲಹೆ ಮಾಡಿದರು.
ಗ್ರಾಮಕ್ಕೆ ಎಸ್.ಟಿ. ಸಮುದಾಯ ಭವನ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು. 14ನೇ ಶತಮಾನದಲ್ಲಿ ಕುರಿ ಖರೀದಿಗೆ ಕರ ಇಲ್ಲದಂತೆ ನೋಡಿಕೊಂಡ ಶ್ರೇಯ ಬೋಮಗೊಂಡೇಶ್ವರರಿಗೆ ಸಲ್ಲುತ್ತದೆ ಎಂದು ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿದರು.
ಬೋಮಗೊಂಡೇಶ್ವರರು ಬೀದರ್ ಕೋಟೆ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ ನುಡಿದರು.
ಬೋಮಗೊಂಡೇಶ್ವರ ಜೀವನ ಹಾಗೂ ಸಾಧನೆ ಕುರಿತು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಮಾತನಾಡಿದರು. ಶಿವಕುಮಾರ ಕುಪ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಲಬುರಗಿ ಜಿಲ್ಲೆಯ ತಿಂಥಣಿ ಕನಕ ಗುರುಪೀಠದ ಸಿದ್ಧರಾಮನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯೆ ಹೀರಾಬಾಯಿ ಪರಶುರಾಮ ಕುಪ್ಪೆ ಅಧ್ಯಕ್ಷತೆ ವಹಿಸಿದ್ದರು.
ಭಾಗ್ಯಶ್ರೀ ದುರ್ಗೆ ಭರತ ನಾಟ್ಯ ಪ್ರದರ್ಶಿಸಿದರು. ಕಲಾ ತಂಡಗಳು ಪ್ರದರ್ಶಿಸಿದ ಡೊಳ್ಳು ಕುಣಿತ ಎಲ್ಲರ ಗಮನ ಸೆಳೆಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಮಾಜಿ ಸದಸ್ಯ ಶಿವರಾಜ ಹಾಸನಕರ್, ಸಮಾಜದ ಮುಖಂಡರಾದ ಕೆ.ಡಿ. ಗಣೇಶ, ರತಿಕಾಂತ ಜೋಜನಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುಭಾಷ್ ನಾಗೂರೆ, ಮೈಲಾರ ಮಲ್ಲಣ್ಣ ದೇವಸ್ಥಾನದ ಅಧ್ಯಕ್ಷ ಪ್ರಕಾಶ ಮೇತ್ರೆ, ಬೋಮಗೊಂಡ ಚಿಟ್ಟಾವಾಡಿ, ನಿರಂಜಪ್ಪ ಪಾತ್ರೆ, ರಾಜಕುಮಾರ ಚಿಟ್ಟಾವಾಡಿ, ಡಾ. ಉದಯಸಿಂಗ್ ಮಲ್ಕಾಪುರ, ಹಣಮಂತ ಮಲ್ಕಾಪುರ ಉಪಸ್ಥಿತರಿದ್ದರು. ಎಂಪಿ ವೈಜಿನಾಥ ನಿರೂಪಿಸಿದರು. ಬಾಲಾಜಿ ಕುಪ್ಪೆ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.