ಸಂಗೋಳಗಿ (ಬೀದರ್): ‘ಇಂದಿನ ದಿನಮಾನಗಳಲ್ಲಿ ನೂರಾರು ಮಂದಿರ, ಮಸೀದಿ ಹಾಗೂ ಚರ್ಚ್ಗಳನ್ನು ಕಟ್ಟುವುದಕ್ಕಿಂತ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಿದೆ. ಸೌಹಾರ್ದತೆಯ ಸಂಬಂಧಗಳನ್ನು ಬೆಸೆದು ರಾಷ್ಟ್ರ ನಿರ್ಮಾಣ ಮಾಡಬೇಕಾಗಿದೆ’ ಎಂದು ದೇಗಲಮಡಿ ಆಶ್ರಮದ ಬಸವಲಿಂಗ ಅವಧೂತರು ಸಲಹೆ ನೀಡಿದರು.
ಮಹಾ ಸೂಫಿ ಸಂತ ಖುತುಬಿ ಸಾಹೇಬರ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಬೀದರ್ ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ಆಯೋಜಿಸಿದ್ದ ‘ಪ್ರವಚನ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
‘ನಮ್ಮದು ಧರ್ಮ ನಿರಪೇಕ್ಷತೆಯ ಸೌಹರ್ದತೆಯ ನಾಡಾಗಿದೆ. ಇದು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರವೂ ಆಗಿದೆ. ಧಾರ್ಮಿಕ ಪ್ರಚೋದನೆ ಒಳಗಾಗದೇ ಶಾಂತಿ ಸೌಹಾರ್ದತೆಯನ್ನು ಕಾಯ್ದುಕೊಂಡು ಬರಬೇಕಾಗಿದೆ. ಹಿರಿಯರು ಕಿರಿಯರಿಗೆ ಈ ದಿಸೆಯಲ್ಲಿ ಮಾರ್ಗದರ್ಶನ ನೀಡಬೇಕಿದೆ. ಇಂದಿನ ಯುವಕರು ಅದನ್ನು ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ನಾಡು ಕಟ್ಟಬೇಕಿದೆ’ ಎಂದು ಹೇಳಿದರು.
‘ನಾನು ವೇದಿಕೆ ಮೇಲೆ ಕುಳಿತು ಪ್ರವಚನ ನೀಡುತ್ತಿರಬಹುದು. ಆದರೆ, ನಾಡಿನ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಉಳಿಸಿಕೊಂಡು ಹೋಗುವ ಭಕ್ತರಿಗಿಂತ ದೊಡ್ಡವನಲ್ಲ. ಸೌಹಾರ್ದತೆಯನ್ನು ಮುಂದುವರಿಸಿಕೊಂಡು ಹೋಗುವ ಭಕ್ತರೇ ನಮ್ಮ ಪಾಲಿಗೆ ಶ್ರೇಷ್ಠರು’ ಎಂದು ನುಡಿದರು.
‘ನಮ್ಮಂಥ ಜನಸಾಮಾನ್ಯರು ವೈಯಕ್ತಿಕ ಆಸ್ತಿ ಮಾಡಲು ಹೆಚ್ಚು ಒತ್ತು ಕೊಡಬಾರದು. ಜನ ಸ್ಮರಿಸುವ ರೀತಿಯಲ್ಲಿ ಸಮಾಜಕ್ಕೆ ಆಸ್ತಿ ಮಾಡಿ ಆದರ್ಶರಾಗಬೇಕಾಗಿದೆ. ಈ ದಿಸೆಯಲ್ಲಿ ಧಾರ್ಮಿಕ ಮುಖಂಡರು ವಿಶೇಷ ಆಸಕ್ತಿ ವಹಿಸಬೇಕಿದೆ’ ಎಂದು ತಿಳಿಸಿದರು.
‘ಇಂದು ವೈಯಕ್ತಿಕ ಆಸೆ, ಸ್ವಾರ್ಥ ಹಾಗೂ ಅಹಂ ವ್ಯಕ್ತಿಯ ಬದುಕಿಗೆ ಹಾಗೂ ಕುಟುಂಬಕ್ಕೆ ಮಾರಕವಾಗಿವೆ. ಮನೆಯಲ್ಲೇ ಅತ್ತೆಗೊಂದು, ಸೊಸೆಗೊಂದು ಕನ್ನಡಿ ಇವೆ. ಸೌಂದರ್ಯ ವರ್ಧಕಗಳೂ ಇವೆ. ಯುವಕರು ಕೃಷಿಯಿಂದ ವಿಮುಖರಾಗಿ ಮದ್ಯ ಸೇವನೆಯಂತಹ ದುಶ್ಚಟಗಳ ದಾಸರಾಗುತ್ತಿದ್ದಾರೆ. ಮೊಬೈಲ್ ಗೀಳು ಅವರನ್ನು ಸೋಮಾರಿಗಳನ್ನಾಗಿ ಮಾಡಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಯುವಕರು ಮೊಬೈಲ್ ಬದಿಗಿರಿಸಿ ತಾಯಿ, ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡರೆ ಕುಟುಂಬದಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಲಿದೆ. ಕುಟುಂಬಕ್ಕೆ ಉತ್ತಮ ಆದಾಯ ಬರಲಿದೆ. ಯುವಕರಲ್ಲಿ ಶ್ರಮ ಪ್ರವೃತ್ತಿ ಬೆಳೆಯಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.