ADVERTISEMENT

ಬೀದರ್ | ಬಸ್-ಕಾರ್ ಮಧ್ಯೆ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 15:13 IST
Last Updated 12 ಆಗಸ್ಟ್ 2022, 15:13 IST
ಬೀದರ್ ತಾಲ್ಲೂಕಿನ ಹೊನ್ನಿಕೇರಿ ಕ್ರಾಸ್ ಸಮೀಪ ಬಸ್-ಕಾರ್ ನಡುವೆ ಡಿಕ್ಕಿ ಸಂಭವಿಸಿರುವುದು
ಬೀದರ್ ತಾಲ್ಲೂಕಿನ ಹೊನ್ನಿಕೇರಿ ಕ್ರಾಸ್ ಸಮೀಪ ಬಸ್-ಕಾರ್ ನಡುವೆ ಡಿಕ್ಕಿ ಸಂಭವಿಸಿರುವುದು   

ಜನವಾಡ: ಬೀದರ್-ಭಾಲ್ಕಿ ಮುಖ್ಯ ರಸ್ತೆಯಲ್ಲಿ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಕ್ರಾಸ್ ಸಮೀಪ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಸ್ವಿಫ್ಟ್ ಕಾರ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಕಾರ್‍ನಲ್ಲಿ ಇದ್ದ ಐವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾದರೆ, ಇಬ್ಬರು ಮಕ್ಕಳು ಸೇರಿ ಮೂವರು ಗಂಭೀರ ಗಾಯಗೊಂಡಿದ್ದಾರೆ.


ಹೈದರಾಬಾದ್‍ನ ಅಬ್ದುಲ್ ಗಂಜ್‍ನ ಹಾಸ್ಮಿ ಸೈಯದ್ ಇಕ್ಬಾಲ್ (65) ಹಾಗೂ ಹಾಸ್ಮಿ ಸೈಯದ್ ಮುಖೇನ್ (46) ಮೃತಪಟ್ಟವರು. ಗಾಯಗೊಂಡ ಚಾಲಕ ಶಹಬಾಜ್ ಸತ್ತಾರ್ (27), ಅಬ್ದುಲ್ಲಾ ಉಬೇದ್ ಹಾಸ್ಮಿ (7) ಹಾಗೂ ಹುರೈನ್ ಅವರನ್ನು ಚಿಕಿತ್ಸೆಗಾಗಿ ಬೀದರ್‍ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT


ಹೈದರಾಬಾದ್‍ನಿಂದ ಸಂಬಂಧಿಕರ ಭೇಟಿಗೆ ಉದಗಿರಕ್ಕೆ ತೆರಳುತ್ತಿದ್ದ ಐವರು ಇದ್ದ ಕಾರ್ ಹಾಗೂ ಭಾಲ್ಕಿಯಿಂದ ಬೀದರ್‌ಗೆ ಬರುತ್ತಿದ್ದ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಅವಘಡ ಜರುಗಿದೆ.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್, ಡಿವೈಎಸ್‍ಪಿ ಕೆ.ಎಂ. ಸತೀಶ, ಸಿಪಿಐ ಶ್ರೀಕಾಂತ ಅಲ್ಲಾಪುರ ಹಾಗೂ ಜನವಾಡ ಪೊಲೀಸ್ ಠಾಣೆ ಪಿಎಸ್‍ಐ ಶಿವರಾಜ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.