ಬೀದರ್: ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ 89ನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರ ಸಚಿವ, ಪಶು ಸಂಗೋಪನಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೋರಾಟಗಾರರ ಮನವಿಗೆ ಸ್ಪಂದಿಸದಿರುವುದನ್ನು ಖಂಡಿಸಿ ಸಂತ್ರಸ್ತರು ಮೇಣದಬತ್ತಿ ಉರಿಸಿ ಪ್ರತಿಭಟನೆ ನಡೆಸಿದರು.
ಸಂತ್ರಸ್ತ ರೈತರು ಹಾಗೂ ರೈತ ಮಹಿಳೆಯರು ಧರಣಿ ಸ್ಥಳದಿಂದ ಮೇಣದಬತ್ತಿ ಹಿಡಿದು ಅಂಬೇಡ್ಕರ್ ವೃತ್ತದವರೆಗೆ ತೆರಳಿ ಅಲ್ಲಿಂದ ಮರಳಿ ಧರಣಿ ಸ್ಥಳಕ್ಕೆ ಬಂದು ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದರು.
ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಾತನಾಡಿ,‘ಕಳೆದ 89 ದಿವಸಗಳಿಂದ ಸಂತ್ರಸ್ತ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಯಾರೊಬ್ಬರೂ ಇಲ್ಲಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ. ಸರ್ಕಾರ ತನ್ನ ಉದಾಸೀನತೆ ನಿಲ್ಲಿಸದಿದ್ದರೆ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ನಾಗಶೆಟ್ಟೆಪ್ಪ ಹಚ್ಚಿ ಮಾತನಾಡಿದರು.
ಸಮಿತಿ ನಿರ್ದೇಶಕ ವೀರಭದ್ರಪ್ಪ ಉಪ್ಪಿನ್, ಅಣ್ಣಾರಾವ್, ಕಲ್ಯಾಣ ರಾವ್ ಚನಶೆಟ್ಟಿ, ಸೂರ್ಯಕಾಂತ, ವಿಜಯಕುಮಾರ ಡಾಕುಳಗಿ, ರಾಜಶೇಖರ, ರಾಜಪ್ಪ, ವಿಶ್ವನಾಥ, ಅಕಬರ್ ಹುಸೇನ್, ಸಂಗಾರೆಡ್ಡಿ, ಬಾಬರ್ ಪಾಶಾ, ಲಕ್ಷ್ಮಿಬಾಯಿ ಸೌದೆ, ಸುಧಾಕರ, ಅಲ್ತಾಫ್, ಘುಡುಸಾಬ, ಮಲ್ಲಿಕಾರ್ಜುನ ಹಚ್ಚಿ, ರಾಮರೆಡ್ಡಿ, ಶಂಕರೆಪ್ಪ ರಾಜಪ್ಪ, ಹಿಂದೊಡ್ಡಿ, ವಿಶ್ವನಾಥ ಸ್ವಾಮಿ, ಮಾದಪ್ಪ, ಶಿವಲಿಂಗಪ್ಪ, ಶಬ್ಬೀರಮಿಯಾ, ಶ್ರೀನಿವಾಸ ಹಾಗೂ ಬಾಬುರಾವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.