ADVERTISEMENT

ಭಕ್ತರ ಮಧ್ಯೆ ಚನ್ನಬಸವ ಶಿವಯೋಗಿಗಳ ರಥೋತ್ಸವ

ಸಂಭ್ರಮದ ಹಾರಕೂಡ ಜಾತ್ರಾ ಮಹೋತ್ಸವ; ಕೋವಿಡ್‌ ಹಿನ್ನೆಲೆ ಬೆಳಿಗ್ಗೆ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 1:44 IST
Last Updated 19 ಜನವರಿ 2021, 1:44 IST
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದಲ್ಲಿ ಚನ್ನಬಸವ ಶಿವಯೋಗಿಗಳ 69 ನೇ ಜಾತ್ರೆ ಅಂಗವಾಗಿ ಸೋಮವಾರ ಬೆಳಿಗ್ಗೆ ನಡೆದ ರಥೋತ್ಸವಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಚನ್ನವೀರ ಶಿವಾಚಾರ್ಯರು ಪಾರಂಪರೀಕ ಪೋಷಾಕಿನಲ್ಲಿದ್ದರು. ಶಾಸಕ ರಾಜಶೇಖರ ಪಾಟೀಲ ಪಾಲ್ಗೊಂಡಿದ್ದರು
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದಲ್ಲಿ ಚನ್ನಬಸವ ಶಿವಯೋಗಿಗಳ 69 ನೇ ಜಾತ್ರೆ ಅಂಗವಾಗಿ ಸೋಮವಾರ ಬೆಳಿಗ್ಗೆ ನಡೆದ ರಥೋತ್ಸವಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಚನ್ನವೀರ ಶಿವಾಚಾರ್ಯರು ಪಾರಂಪರೀಕ ಪೋಷಾಕಿನಲ್ಲಿದ್ದರು. ಶಾಸಕ ರಾಜಶೇಖರ ಪಾಟೀಲ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಲಿಂ.ಚನ್ನಬಸವ ಶಿವಯೋಗಿಗಳ 69ನೇ ಜಾತ್ರೆ ಅಂಗವಾಗಿ ರಥೋತ್ಸವ ಸಂಭ್ರಮದಿಂದ ನೆರವೇರಿತು.

ಕೋವಿಡ್‌ ಹಿನ್ನೆಲೆಯಲ್ಲಿ ಜಾತ್ರೆ ಸರಳವಾಗಿ ಆಚರಿಸಲಾಗುತ್ತದೆ ಎಂದು ಮಠದಿಂದ ಪ್ರಕಟಣೆ ನೀಡಲಾಗಿತ್ತಾದರೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಪ್ರತಿ ವರ್ಷ ಸಂಜೆ ರಥ ಎಳೆಯಲಾಗುತ್ತಿತ್ತು. ಆದರೆ, ಈ ಸಲ ಹೆಚ್ಚಿನ ಜನರು ಸೇರಬಾರದು ಎಂಬ ಉದ್ದೇಶದಿಂದ ಬೆಳಿಗ್ಗೆ 11.30 ಗಂಟೆಗೆ ರಥೋತ್ಸವ ಜರುಗಿತು. ಮಠಾಧಿಪತಿ ಚನ್ನವೀರ ಶಿವಾಚಾರ್ಯರು ಕೈಯಲ್ಲಿ ಮಂತ್ರದಂಡ ಹಿಡಿದು, ತಲೆ ಮೇಲೆ ಟೊಪ್ಪಿಗೆ ಹಾಕಿ ಪಾರಂಪರಿಕ ಪೋಷಾಕಿನಲ್ಲಿ ಪಾಲ್ಗೊಂಡಿದ್ದರು.

ಬಣ್ಣಬಣ್ಣದ ಪತಾಕೆ, ತಳೀರು ತೋರಣಗಳಿಂದ ಸಿಂಗರಿಸಲಾಗಿದ್ದ ರಥವನ್ನು ಎಳೆದಾಗ ಭಕ್ತರು ಚನ್ನಬಸವೇಶ್ವರ ಮಹಾರಾಜ ಕೀ ಜೈ ಎಂದು ಜೈಘೋಷ ಹಾಕಿದರು. ರಥದ ಮೇಲೆ ಬಾಳೆಹಣ್ಣು, ನಾಣ್ಯ ಎಸೆಯಲಾಯಿತು. ಮಠದ ಎದುರಿನಿಂದ ಮಹಾದೇವ ಮಂದಿರದ ಕಡೆಗೆ ರಥವನ್ನು ಎಳೆದು ಮತ್ತೆ ಮೊದಲಿನ ಸ್ಥಳಕ್ಕೆ ತಂದು ನಿಲ್ಲಿಸಲಾಯಿತು.

ADVERTISEMENT

ಶಾಸಕರಾದ ರಾಜಶೇಖರ ಪಾಟೀಲ ಹುಮನಾಬಾದ್, ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮೂಡ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರ ಮೇತ್ರೆ, ಆನಂದ ಪಾಟೀಲ, ಪ್ರಮುಖರಾದ ಶರಣು ಸಲಗರ,ಪ್ರದೀಪ ವಾತಡೆ, ಆನಂದ ದೇವಪ್ಪ, ಬಾಬು ಹೊನ್ನಾನಾಯಕ, ಜಗನ್ನಾಥ ಪಾಟೀಲ ಮಂಠಾಳ, ರಾಜಕುಮಾರ ಶಿರಗಾಪುರ, ಎಂ.ಬಿ.ಮರಮಕಲ್, ಕಲಬುರ್ಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಬಿ.ಕೆ.ಹಿರೇಮಠ, ಮಲ್ಲಿನಾಥ ಹಿರೇಮಠ, ಸಿದ್ದು ಬಿರಾದಾರ, ಅಪ್ಪಣ್ಣ ಜನವಾಡಾ ಪಾಲ್ಗೊಂಡಿದ್ದರು.

ಕುಸ್ತಿ ಸ್ಪರ್ಧೆ ಇಲ್ಲ
ಪ್ರತಿವರ್ಷ ಮೂರು ದಿನ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಸಲ ಕೋವಿಡ್‌ ಹಿನ್ನೆಲೆಯಲ್ಲಿ ಶಿವಾನುಭವ ಚಿಂತನಗೋಷ್ಠಿ, ಕುಸ್ತಿ ಸ್ಪರ್ಧೆ, ಜಾನುವಾರು ಪ್ರದರ್ಶನ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ ಜಾತ್ರೆ ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.