ಬಸವಕಲ್ಯಾಣ: ಬಿಜೆಪಿ ಸೇವಾ ಸೈನಿಕರಿಂದ ಭಾನುವಾರ ನಗರದಲ್ಲಿನ ಐತಿಹಾಸಿಕ ಸ್ಥಳವಾದ ಬಸವಣ್ಣನವರ ಪರುಷಕಟ್ಟೆಯ ಸುತ್ತಲಿನ ಪ್ರದೇಶದಲ್ಲಿ ಚರಂಡಿ ಸ್ವಚ್ಛತೆ ಕೈಗೊಳ್ಳಲಾಯಿತು. ಅನಗತ್ಯ ಮಣ್ಣು, ಕಸ, ಘನತ್ಯಾಜ್ಯವನ್ನು ಬೇರೆಡೆ ಸಾಗಿಸಲಾಯಿತು.
ನಂತರ ಬಿಜೆಪಿ ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ ಮಾತನಾಡಿ, ‘ಓಣಿ ನಿವಾಸಿಗಳು ಮನೆ ಕಸವನ್ನು ರಸ್ತೆಯಲ್ಲಿ ಚೆಲ್ಲದೆ ನಗರಭೆಯ ಕಸದ ಬುಟ್ಟಿಗಳಲ್ಲಿ ಹಾಕಿ ಪೌರ ಕಾರ್ಮಿಕರಿಗೆ ಸಹಕಾರ ನೀಡಬೇಕು. ಚರಂಡಿಗಳಲ್ಲಿ ಕಲ್ಲು, ಮಣ್ಣು ಬೀಳುವುದರಿಂದ ನೀರು ಮುಂದಕ್ಕೆ ಸಾಗದೆ ಅಲ್ಲಿಯೇ ಸಂಗ್ರಹಗೊಳ್ಳುತ್ತದೆ. ಈ ಕಾರಣ ಮೂಗಿಗೆ ಗಬ್ಬು ನಾರುತ್ತದೆ. ನೊಣ, ಸೊಳ್ಳೆಗಳು ಹೆಚ್ಚಾಗಿ ನಾನಾ ರೋಗಗಳು ಹರಡುತ್ತವೆ’ ಎಂದರು.
‘ಮಳೆಗಾಲ ಸಮೀಪವಿದೆ. ಚರಂಡಿಗಳು ಮಣ್ಣಿನಿಂದ ತುಂಬಿಕೊಂಡರೆ ಮಳೆ ನೀರು ಸಾಗದೆ ಮನೆಗಳಲ್ಲಿ ನುಗ್ಗುತ್ತದೆ. ಹೀಗಾಗದಂತೆ ವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಬಿಜೆಪಿ ಸೇವಾ ಸೈನಿಕರ 29 ಜನರ ತಂಡದಿಂದ ವಾರದಿಂದ ನಾನಾ ಓಣಿಗಳಲ್ಲಿ ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ. ನಾರಾಯಣಪುರ ಕ್ರಾಸ್ನ ಇಂದಿರಾ ಕ್ಯಾಂಟೀನ್, ಮುಖ್ಯ ರಸ್ತೆ, ಧರ್ಮಪ್ರಕಾಶ ಓಣಿ, ಕಾಳಿಗಲ್ಲಿ, ಪರುಷಕಟ್ಟೆ ಓಣಿಯಲ್ಲಿ ಸ್ವಚ್ಛತೆ ಕೈಗೊಂಡಿದ್ದು ಇತರೆ ಓಣಿಗಳಲ್ಲಿಯೂ ಮಳೆ ನೀರು ಮುಂದಕ್ಕೆ ಸಾಗುವುದಕ್ಕೆ ಅಡೆತಡೆ ಇದ್ದಲ್ಲಿ ತೆಗೆಯಲಾಗುತ್ತದೆ’ ಎಂದರು.
ಪಕ್ಷದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಚಣ್ಣ ಸ್ವಾಮಿ, ಯುವ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಮನೋಜ ತಂಬುರ್ಜೆ, ಹಿಂದುಳಿದ ವರ್ಗಗಳ ಮೋರ್ಚಾ ನಗರ ಘಟಕದ ಅಧ್ಯಕ್ಷ ಅಮೂಲ್ ಸದಾನಂದೆ, ಕಾರ್ಯದರ್ಶಿ ಅಭಿಜೀತ್ ಮುತ್ತೆ, ಸಿದ್ಧಾರ್ಥ ಭಾವಿದೊಡ್ಡಿ, ಪ್ರಶಾಂತ ವಾಲೆ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶಿವಶಂಕರ ಅಮರಶೆಟ್ಟಿ, ವಿಶ್ವನಾಥ ಚಿರಡೆ, ಪ್ರದೀಪ ಮುಜನಾಯಕ, ಗೌರೀಶ ಮುತ್ತಂಗೆ, ರಾಹುಲ ರಂಗದಳ, ವಿನೋದ ಬಾಡ್ಗೆಕರ್, ಭದ್ರು ಜಂಗೆ, ಸಂತೋಷ ಅಮರಶೆಟ್ಟಿ ಮೊದಲಾದವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.