ADVERTISEMENT

ಬೀಜ ಕೊರತೆಯಾಗದಂತೆ ನೋಡಿಕೊಳ್ಳಿ: ಕಾಂಗ್ರೆಸ್‌ ತಾಲ್ಲೂಕು ಘಟಕದಿಂದ ಮನವಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 10:00 IST
Last Updated 13 ಜೂನ್ 2020, 10:00 IST
ರೈತರಿಗೆ ಸಮರ್ಪಕ ಬಿತ್ತನೆ ಬೀಜ ಪೂರೈಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಶುಕ್ರವಾರ ತಹಶೀಲ್ದಾರ್ ಎಂ.ಚಂದ್ರಶೇಖರ ಅವರಿಗೆ ಮನವಿಪತ್ರ ಸಲ್ಲಿಸಿದರು
ರೈತರಿಗೆ ಸಮರ್ಪಕ ಬಿತ್ತನೆ ಬೀಜ ಪೂರೈಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಶುಕ್ರವಾರ ತಹಶೀಲ್ದಾರ್ ಎಂ.ಚಂದ್ರಶೇಖರ ಅವರಿಗೆ ಮನವಿಪತ್ರ ಸಲ್ಲಿಸಿದರು   

ಔರಾದ್: ಜಿಲ್ಲಾಡಳಿತ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ವಿತರಿಸುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ದೂರಿದೆ.

ತಾಲ್ಲೂಕು ಕಾಂಗ್ರೆಸ್ ಮುಖಂಡರು ಶುಕ್ರವಾರ ತಹಶೀಲ್ದಾರ್ ಎಂ.ಚಂದ್ರಶೇಖರ ಅವರನ್ನು ಭೇಟಿ ಮಾಡಿ ರೈತರಿಗೆ ಬಿತ್ತನೆ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

‘ಈಗಾಗಲೇ ಮುಂಗಾರು ಮಳೆ ಶುರುವಾಗಿ ಬಿತ್ತನೆ ಸಿದ್ಧತೆಯಲ್ಲಿರುವಾಗ ರೈತರಿಗೆ ಸಮರ್ಪಕವಾಗಿ ಬೀಜ ಸಿಗುತ್ತಿಲ್ಲ. ಸಾಕಷ್ಟು ರೈತರಿಗೆ ಸೋಯಾ ಬೀಜ ಸಿಗದೆ ಬಿತ್ತನೆಗೆ ಹಿನ್ನಡೆಯಾಗುತ್ತಿದೆ. ಈಗ ವಿತರಿಸಿದ ಬೀಜವೂ ಕಳಪೆ ಎಂದು ಹೇಳಲಾಗುತ್ತಿದೆ. ಹೀಗೆ ಬಿತ್ತನೆಗೆ ಮುನ್ನವೇ ರೈತರಿಗೆ ಕತ್ತಲಲ್ಲಿ ಇಡುತ್ತಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ’ ಎಂದು ಕಾಂಗ್ರೆಸ್ ಧುರೀಣ ವಿಜಯಕುಮಾರ ಕೌಡಾಳೆ ಅಸಮಾಧಾನ ಹೊರ ಹಾಕಿದರು.

ADVERTISEMENT

‘ಸಚಿವ ಪ್ರಭು ಚವಾಣ್ ತವರು ಕ್ಷೇತ್ರದಲ್ಲೇ ರೈತರು ನಿತ್ಯ ಬಿತ್ತನೆ ಬೀಜಕ್ಕಾಗಿ ಅಲೆಯುತ್ತಿದ್ದಾರೆ. ಆದರೆ ಅವರು ಮಾತ್ರ ಈ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ಅವರು ದೂರಿದರು.

‘ಮುಂಗಾರು ಹಂಗಾಮಿನ ಬೀಜ ವಿತರಣೆ ವಿಷಯದಲ್ಲಿ ಕೃಷಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ. ಮೊದಲೇ ಸಿದ್ಧತೆ ಮಾಡಿಕೊಂಡಿದ್ದರೆ ಹೀಗಾಗುತ್ತಿರಲಿಲ್ಲ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗಾ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಬಂಟಿ ದರಬಾರೆ, ಗುಂಡಪ್ಪ ಮುದಾಳೆ, ಧುರೀಣ ರಾಮಣ್ಣ ವಡೆಯರ್, ಶಾಮಣ್ಣ ಉಜನಿಕರ್, ಆನಂದ ಚವಾಣ್, ಆರೀಫ್ ಅಹ್ಮದ್, ಶಂಕರ ಪಾಟೀಲ, ಪ್ರದೀಪ ಪಾಟೀಲ, ಅನೀಲ ವಡೆಯರ್, ಅನೀಲಕುಮಾರ ನಿರ್ಮಳೆ ಹಾಗೂ ಬಾಲಾಜಿ ಮಿತಬಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.