ADVERTISEMENT

ಬೀದರ್ | 69 ಮಂದಿಗೆ ಕೋವಿಡ್‌ ಸೋಂಕು

ಕೋವಿಡ್‌ ವೈರಾಣು ಪೀಡತರ ಸಂಖ್ಯೆ 1262ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 4:01 IST
Last Updated 18 ಜುಲೈ 2020, 4:01 IST
ಬೀದರ್‌ನಲ್ಲಿ ಲಾಕ್‌ಡೌನ್‌ ನಡುವೆ ಬಾಲಕರಿಬ್ಬರು ಸೈಕಲ್‌ ಸವಾರಿ ಮಾಡಿ ಸಂಭ್ರಮಿಸಿದರು
ಬೀದರ್‌ನಲ್ಲಿ ಲಾಕ್‌ಡೌನ್‌ ನಡುವೆ ಬಾಲಕರಿಬ್ಬರು ಸೈಕಲ್‌ ಸವಾರಿ ಮಾಡಿ ಸಂಭ್ರಮಿಸಿದರು   

ಬೀದರ್‌: ಜಿಲ್ಲೆಯಲ್ಲಿ ಶುಕ್ರವಾರ 69 ಜನರಿಗೆ ಕೋವಿಡ್‌ ಸೋಂಕು ತಗುಲಿದೆ. ಕೋವಿಡ್ ವೈರಾಣು ಪೀಡಿತರ ಸಂಖ್ಯೆ 1262 ಕ್ಕೆ ಏರಿದೆ.

ಬೀದರ್‌ ತಾಲ್ಲೂಕಿನ ಕಮಠಾಣಾದ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್‌ ಉಪನ್ಯಾಸಕ ಶಶಿಕಾಂತ ಶೇರಿಕಾರ (41) ಅನಾರೋಗ್ಯದಿಂದಾಗಿ ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಜುಲೈ 6ರಂದು ವೈದ್ಯಕೀಯ ವರದಿ ಪಾಸಿಟಿವ್‌ ಬಂದಿತ್ತು. ಕೋವಿಡ್‌ ನಿಯಮದ ಪ್ರಕಾರ ಹುಮನಾಬಾದ್‌ ತಾಲ್ಲೂಕಿನ ಸಿಂದಬಂದಗಿ ಗ್ರಾಮದ ಹೊರ ವಲಯದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಆರು ಬಾಲಕಿಯರು, ಇಬ್ಬರು ಬಾಲಕರು, 38 ಪುರುಷರು ಹಾಗೂ 31 ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ಬೀದರ್‌ ತಾಲ್ಲೂಕಿನಲ್ಲಿ ಅತಿ ಹೆಚ್ಚು ಒಂದೇ ದಿನ 36 ಮಂದಿಗೆ ಸೋಂಕು ತಗುಲಿದೆ. ಬಸವಕಲ್ಯಾಣದಲ್ಲಿ 15, ಭಾಲ್ಕಿ ತಾಲ್ಲೂಕಿನಲ್ಲಿ ಮೂವರಿಗೆ, ಹುಮನಾಬಾದ್‌, ಚಿಟಗುಪ್ಪ ತಾಲ್ಲೂಕು ಸೇರಿ 15 ಜನರಿಗೆ ಕೋವಿಡ್‌ ಸೋಂಕು ತಗುಲಿದೆ.

ADVERTISEMENT

ಜಿಲ್ಲೆಯಲ್ಲಿ ಈವರೆಗೆ 45,103 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಇವರಲ್ಲಿ 42991 ಮಂದಿಯ ವೈದ್ಯಕೀಯ ವರದಿ ನೆಗೆಟಿವ್ ಹಾಗೂ 1,262 ಜನರ ವರದಿ ಪಾಸಿಟಿವ್‌ ಬಂದಿದೆ. 488 ಮಂದಿ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 55 ಮಂದಿ ಮೃತಪಟ್ಟಿದ್ದಾರೆ. 150 ಕಂಟೇನ್ಮಂಟ್‌ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

47 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 850 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಬರಬೇಕಿದೆ.

ಲಾಕ್‌ಡೌನ್‌: ಎರಡನೇ ದಿನವೂ ಬಂದ್‌

ಲಾಕ್‌ಡೌನ್‌ನ ಎರಡನೇ ದಿನವಾದ ಶುಕ್ರವಾರವೂ ಜಿಲ್ಲೆ ಸ್ತಬ್ಧಗೊಂಡಿತ್ತು. ಆಸ್ಪತ್ರೆ, ಮೆಡಿಕಲ್‌, ಕಿರಾಣಿ ಹಾಗೂ ತರಕಾರಿ ಅಂಗಡಿಗಳು ಬಿಟ್ಟರೆ ಉಳಿದೆಲ್ಲ ಅಂಗಡಿಗಳು ಬಂದ್‌ ಇದ್ದವು. ಗಾಂಧಿಗಂಜ್‌ ಸಂಪೂರ್ಣ ಬಂದ್‌ ಇತ್ತು.

ನಗರದಲ್ಲಿ ಕೆಲ ಉಪಾಹಾರ ಅಂಗಡಿಗಳು ತೆರೆದುಕೊಂಡಿದ್ದರೂ ಗ್ರಾಹಕರೇ ಇಲ್ಲದ ಕಾರಣ ಮಧ್ಯಾಹ್ನದ ವೇಳೆಗೆ ಮುಚ್ಚಿದವು. ಹೋಟೆಲ್‌ ಹಾಗೂ ಖಾನಾವಳಿಯಲ್ಲಿ ಗ್ರಾಹಕರಿಗೆ ಪಾರ್ಸಲ್‌ ವ್ಯವಸ್ಥೆ ಇತ್ತು.

ಕಲಬುರ್ಗಿ, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್‌ಗೆ ಬೆರಳೆಣಿಕೆಯಷ್ಟು ಬಸ್‌ಗಳು ಸಂಚರಿಸಿದವು. ಮಧ್ಯಾಹ್ನದ ನಂತರ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರೇ ಇರಲಿಲ್ಲ. ಔರಾದ್‌ ಸೇರಿದಂತೆ ಜಿಲ್ಲೆಯ ಹೋಬಳಿ ಕೇಂದ್ರಗಳಿಗೆ ಸರ್ಕಾರಿ ನೌಕರರು ಬೈಕ್‌ ಮೇಲೆ ತೆರಳಿದರು.

ನಗರಸಭೆಯ ಸಿಬ್ಬಂದಿ ವಾಹನದಲ್ಲಿ ನಗರದಾದ್ಯಂತ ಸಂಚರಿಸಿ ಧ್ವನಿವರ್ಧಕ ಮೂಲಕ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲೇ ಉಳಿದು ಕೋವಿಡ್ 19 ಸೋಂಕು ಹರಡುವಿಕೆಯ ಸರಪಳಿ ತುಂಡರಿಸಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಪೊಲೀಸ್‌ ಸಿಬ್ಬಂದಿ ಸಹ ಗಸ್ತು ನಡೆಸಿ ನಗರದಲ್ಲಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದ ಬೈಕ್‌ ಸವಾರರಿಗೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.