ಬೀದರ್: ಬೆಲೆ ಏರಿಕೆ ನಿಯಂತ್ರಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಹೆಸರಿಗೆ ಬರೆದ ಜಂಟಿ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಕಡಿತ ಜನರ ಕಣ್ಣೊರೆಸುವ ತಂತ್ರವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೈಲದ ಮೇಲೆ ಪಡೆಯುತ್ತಿರುವ ಸುಂಕವನ್ನು ಜನರ ಮುಂದಿಡಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಕೋಮು ಸೌಹಾರ್ದ ಸ್ಥಾಪಿಸಬೇಕು. ಬೀದರ್ ತಾಲ್ಲೂಕಿನ ಅಲಿಯಂಬರ್ನಲ್ಲಿ ಶಾಹಿ ಎಕ್ಸ್ಪೋರ್ಟ್ ಸೋಲಾರ್ ಸಿಸ್ಟಮ್ ಕಂಪೆನಿ ಅನುಮತಿಗೂ ಹೆಚ್ಚು ಭೂಮಿ ಖರೀದಿಸಿ, ಸರ್ಕಾರದ ಭೂವಿಯನ್ನೂ ಕಬಳಿಕೆ ಮಾಡಿರುವ ಕಾರಣ ಕಂಪೆನಿಯನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಬಾಬುರಾವ್ ಹೊನ್ನಾ, ಸಹ ಕಾರ್ಯದರ್ಶಿ ಅಲಿ ಅಹಮ್ಮದ್ ಖಾನ್, ಮುಖಂಡರಾದ ನಜೀರ್ ಅಹಮ್ಮದ್, ಗುರುಪಾದಯ್ಯ ಸ್ವಾಮಿ, ಎಂ.ಡಿ. ಖಮರ್ ಪಟೇಲ್, ಎಂ.ಡಿ. ಶಫಾಯತ್ ಅಲಿ, ಪ್ರಭು ತಗಣಿಕರ್, ಮೌಲಾ, ರಾಮಣ್ಣ ಅಲ್ಮಾಸಪುರ, ಸಾಯಿ ಸಿಂಧೆ, ಮಹೇಂದ್ರ ಹೊಸಮನಿ, ನಿತೀಶ್, ಸತ್ಪಾಲ್ ಮೊದಲಾದವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.