ADVERTISEMENT

ಸಾಂಸ್ಕೃತಿಕ, ಕ್ರೀಡಾ ಹಬ್ಬಕ್ಕೆ ಚಾಲನೆ

ಬೀದರ್, ಉದಗೀರ, ಜಹೀರಾಬಾದ್ ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 9:10 IST
Last Updated 16 ಫೆಬ್ರುವರಿ 2020, 9:10 IST
ಉಡಾನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಹಬ್ಬದ ಪ್ರಯುಕ್ತ ಬೀದರ್‌ನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕ್ರೀಡಾ ಸ್ಪರ್ಧೆಗಳನ್ನು ಡಾ. ಚಂದ್ರಕಾಂತ ಗುದಗೆ ಬ್ಯಾಡ್ಮಿಂಟನ್‌ ಆಡುವ ಮೂಲಕ ಉದ್ಘಾಟಿಸಿದರು. ನಿತೇಶ ಬಿರಾದಾರ, ಸೂರ್ಯಕಾಂತ ರಾಮಶೆಟ್ಟಿ ಇದ್ದರು
ಉಡಾನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಹಬ್ಬದ ಪ್ರಯುಕ್ತ ಬೀದರ್‌ನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕ್ರೀಡಾ ಸ್ಪರ್ಧೆಗಳನ್ನು ಡಾ. ಚಂದ್ರಕಾಂತ ಗುದಗೆ ಬ್ಯಾಡ್ಮಿಂಟನ್‌ ಆಡುವ ಮೂಲಕ ಉದ್ಘಾಟಿಸಿದರು. ನಿತೇಶ ಬಿರಾದಾರ, ಸೂರ್ಯಕಾಂತ ರಾಮಶೆಟ್ಟಿ ಇದ್ದರು   

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಂತರ ಪದವಿ ಕಾಲೇಜು ಮಟ್ಟದ ಉಡಾನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಹಬ್ಬಕ್ಕೆ ಇಲ್ಲಿ ಚಾಲನೆ ದೊರೆಯಿತು.

ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸುಮೀತ್ ಸಿಂಧೋಲ್, ‘ರೋಟರಿ ಕ್ಲಬ್ ಸಾಮಾಜಿಕ ಚಟು ವಟಿಕೆಗಳಿಗೆ ಹೆಸರಾಗಿದೆ. ಶಿಕ್ಷಣ, ಆರೋಗ್ಯ, ಪರಿಸರ, ಕ್ರೀಡಾ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿ ಸಿಕೊಂಡಿದೆ’ ಎಂದು ತಿಳಿಸಿದರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷೆ ಶ್ವೇತಾ ಮೇಗೂರ ಮಾತನಾಡಿ, ‘ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಉಡಾನ್ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.
ಈ ಬಾರಿಯ ಉಡಾನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಹಬ್ಬ ಐದನೇ ಆವೃತ್ತಿಯಾಗಿದೆ’ ಎಂದರು.

ADVERTISEMENT

ಉಡಾನ್ ಅಧ್ಯಕ್ಷೆ ಡಾ.ವಿಜಯಾ ಹತ್ತಿ ಮಾತನಾಡಿ, ‘ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಉಲ್ಲಾಸದಿಂದರುತ್ತದೆ.

ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವೂ ಚೆನ್ನಾಗಿರುತ್ತದೆ’ ಎಂದು ಹೇಳಿದರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯದರ್ಶಿ ಡಾ.ನಿತೇಶಕುಮಾರ ಬಿರಾದಾರ, ಕರ್ನಲ್ ಶರಣಪ್ಪ ಸಿಕೇನಪುರ, ಡಾ. ಬಸವರಾಜ ಹುಲ್ಲಾಳೆ ಇದ್ದರು. ರೂಪಾ ಪಾಟೀಲ ನಿರೂಪಿಸಿದರು. ಕಪಿಲ್ ಪಾಟೀಲ ಸ್ವಾಗತಿಸಿದರು. ಸೂರ್ಯಕಾಂತ ರಾಮಶೆಟ್ಟಿ ವಂದಿಸಿದರು.

ನಂತರ ಸೊಲೊ ಗಾಯನ, ಸೊಲೊ ನೃತ್ಯ, ಸಮೂಹ ನೃತ್ಯ, ನಾಟಕ, ಭಾಷಣ, ರಸಪ್ರಶ್ನೆ, ಚಿತ್ರಕಲೆ, ಮಿಸ್ಟರ್ ಉಡಾನ್, ಮಿಸೆಸ್ ಉಡಾನ್ ಸ್ಪರ್ಧೆಗಳು ನಡೆದವು.

ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಗುದಗೆ ಆಸ್ಪತ್ರೆಯ ಮುಖ್ಯಸ್ಥ ಡಾ.ಚಂದ್ರಕಾಂತ ಗುದಗೆ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು.

ಬಾಲಕ ಹಾಗೂ ಬಾಲಕಿಯರ ವಿಭಾಗದ ಬ್ಯಾಡ್ಮಿಂಟನ್ ಸಿಂಗಲ್ಸ್, ಡಬಲ್ಸ್, ಟೆಬಲ್ ಟೆನಿಸ್, ಚೆಸ್ ಸ್ಪರ್ಧೆಗಳು ಜರುಗಿದವು.

ಉಡಾನ್ ಪ್ರಯುಕ್ತ ಭಾನುವಾರ ಬೆಳಿಗ್ಗೆ 6.30ಕ್ಕೆ ರೋಟರಿ ವೃತ್ತದಿಂದ ಪಾಪನಾಶ ಕೆರೆಯವರೆಗೆ ಮುಕ್ತ ಮ್ಯಾರಥಾನ್ ನಡೆಯಲಿದೆ. ಸಂಜೆ 4 ಗಂಟೆಗೆ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ.

ಉಡಾನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಹಬ್ಬದಲ್ಲಿ ಬೀದರ್ ಜಿಲ್ಲೆ, ನೆರೆಯ ತೆಲಂಗಾಣದ ಜಹೀರಾಬಾದ್, ಮಹಾರಾಷ್ಟ್ರದ ಉದಗಿರದ ಪದವಿ, ವೃತ್ತಿಪರ ಕೋರ್ಸ್ ಕಾಲೇಜುಗಳ 17 ರಿಂದ 24 ವರ್ಷದ ಒಳಗಿನ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.