ಔರಾದ್: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ತಾಲ್ಲೂಕಿನ ಕೊಳ್ಳೂರ್ ಗ್ರಾಮದ ಅವಳಿ ಸಹೋದರರು ಭಾನುವಾರ 800 ಕಿ.ಮೀ. ಸೈಕಲ್ ಜಾಥಾ ಹೊರಟರು.
ರೈತ ಚಂದ್ರಕಾಂತ ರ್ಯಾಕಲೆ ಅವರ ಅವಳಿ ಪುತ್ರರಾದ ಅರುಣ ರ್ಯಾಕಲೆ ಹಾಗೂ ಕರುಣ ರ್ಯಾಕಲೆ ಇಲ್ಲಿಯ ಅಮರೇಶ್ವರ ದೇವಸ್ಥಾನದಿಂದ ಜಾಥಾ ಹೊರಟರು.
ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಇಬ್ಬರು ಸಹೋದರರಿಗೆ ಹೂ ಮಾಲೆ ಹಾಕುವ ಮೂಲಕ ಬೀಳ್ಕೊಟ್ಟರು. ‘ನಮ್ಮ ತಾಲ್ಲೂಕಿನ 15 ವರ್ಷದ ಈ ಬಾಲಕರ ದೇಶ ಪ್ರೇಮ ನಾವು ಮೆಚ್ಚಲೇಬೇಕು. ಇದು ಹೆಮ್ಮೆಪಡುವ ದಿನ. ಇವರ ಜಾಥಾ ಯಶಸ್ವಿಯಾಗಲಿ’ ಎಂದು ಹರಸಿದರು. ಹಿರಿಯ ವೈದ್ಯ ಕಲ್ಲಪ್ಪ ಉಪ್ಪೆ ಮಾತನಾಡಿ,‘ಕರ್ನಾಟಕದ ಕಿರಿಟ ಔರಾದ್ನಿಂದ ಚಾಮರಾಜನಗರದ ಮಲೆ ಮಹಾದೇಶ್ವರ ಬೆಟ್ಟದವರೆಗೆ ಈ ಮಕ್ಕಳು ನಡೆಸುವ 25 ದಿನಗಳ ಸೈಕಲ್ ಜಾಥಾ ಸಾಮಾನ್ಯವಾದದ್ದಲ್ಲ. ಅವರಲ್ಲಿನ ದೇಶಪ್ರಮ ಮೆಚ್ಚುವಂತಹದ್ದು’ ಎಂದು ಬಣ್ಣಿಸಿದರು. ಡಾ. ಮನ್ಮತ ಡೋಳೆ ಮಾತನಾಡಿ,‘ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಈ ಬಾಲಕರು ಹಮ್ಮಿಕೊಂಡ ಜಾಥಾ ಎಲ್ಲರಿಗೂ ಪ್ರೇರಣೆಯಾಗಬೇಕು. ದೇಶದ ಸ್ವಾತಂತ್ರ್ಯಕಾಗಿ ತ್ಯಾಗ, ಬಲಿದಾನ ನೀಡಿದವರನ್ನು ಗೌರವಿಸುವ ಈ ಜಾಥಾ ನಿಜಕ್ಕೂ ಅದ್ಭುತ’ ಎಂದರು.
ರಾಜ್ಯ ಪ್ರಾಣಿ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ, ಪ.ಪಂ. ಮುಖ್ಯಾಧಿಕಾರಿ ಶಿವಕುಮಾರ ಘಾಟೆ, ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ, ರಾಮಶೆಟ್ಟಿ ಪನ್ನಾಳೆ, ರತಿಕಾಂತ ಮಜಗೆ, ಶ್ರೀಮಂತ ಪಾಟೀಲ, ವಿಶ್ವನಾಥ ಸ್ವಾಮಿ, ರಿಯಾಜ್ ಪಾಷಾ, ಸೂರ್ಯಕಾಂತ ರ್ಯಾಕಲೆ, ಬಸವರಾಜ ಶೆಟಕಾರ, ಅಶೋಕ ಶೆಂಬೆಳ್ಳಿ, ಹಾವಪ್ಪ ಶೆಂಬೆಳ್ಳಿ, ಬಸವರಾಜ ಹಳ್ಳೆ, ಹಣಮಂತ ನವಾಡೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಜಾಥಾ ಹೊರಟ ಅವಳಿ ಸಹೋದರನ್ನು ಅಮರೇಶ್ವರ ದೇವಸ್ಥಾನದಿಂದ ಕನ್ನಡಾಂಬೆ ವೃತ್ತದವರೆಗೆ ಮೆರವಣಿಗೆ ಮೂಲಕ ಬೀಳ್ಕೊಟ್ಟರು. ದಾರಿಯೂದ್ದಕ್ಕೂ ಸಂತಪುರ, ಮುಸ್ತಾಪುರ, ಕೌಡಗಾಂವ, ಕೌಠಾ ಗ್ರಾಮಸ್ಥರು ಜಾಥಾಗೆ ಸ್ವಾಗತಿಸಿ ಬಾಲಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.