ಬೀದರ್: ‘ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ರೈತರು ಅಧಿಕ ಲಾಭ ಪಡೆಯಲು ಪ್ರಯತ್ನಿಸಬೇಕು’ ಎಂದು ಉಪ ನಿರ್ದೇಶಕ ಡಾ. ರವೀಂದ್ರ ಭೂರೆ ಹೇಳಿದರು.
ನಗರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ರೈತರಿಗೆ ಏರ್ಪಡಿಸಿದ್ದ ಆಧುನಿಕ ಪಶು ಪಾಲನೆ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜಾನುವಾರುಗಳೊಂದಿಗೆ ಆಡು, ಕುರಿ, ಕೋಳಿಗಳನ್ನು ಸಾಕಾಣಿಕೆ ಮಾಡಿದರೆ ಇನ್ನು ಹೆಚ್ಚಿನ ಆದಾಯ ಪಡೆಯಲು ಸಾಧ್ಯವಿದೆ. ಈ ಮೂಲಕ ಕುಟುಂಬದ ಆರ್ಥಿಕ ಮಟ್ಟವನ್ನೂ ಸುಧಾರಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.
‘ಹೈನು ರಾಸುಗಳ ಆಯ್ಕೆ, ಕಡಿಮೆ ಬಂಡವಾಳದ ಮೂಲಕ ಪಶು ಆಹಾರ ತಯಾರಿಕೆ, ಹೈನು ಜಾನುವಾರುಗಳ ಆರೋಗ್ಯ ಕಾಳಜಿ, ಮಾರುಕಟ್ಟೆ, ರಾಸುಗಳ ನಿರ್ವಹಣೆ ಬಗ್ಗೆ ರೈತರು ಸರಿಯಾಗಿ ಅರಿತುಕೊಳ್ಳಬೇಕು’ ಎಂದು ಡಾ.ಯೋಗೇಂದ್ರ ಕುಲಕರ್ಣಿ ಹೇಳಿದರು.
ಡಾ. ದೇವಾನಂದ ತಗಾಲೆ, ಡಾ. ವಿಕ್ರಂ ಚಾಕೋತೆ ಉಪನ್ಯಾಸ ನೀಡಿದರು. ನಂತರ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ ಹತ್ತಿರದ ದೇವಣಿ ಜಾನುವಾರು ಸಂಶೋಧನೆ ಹಾಗು ಮಾಹಿತಿ ಕೇಂದ್ರಕ್ಕೆ ಒಯ್ದು ಕ್ಷೇತ್ರ ದರ್ಶನ ಮಾಡಿಸಲಾಯಿತು.
ಡಾ. ವಿಜಯಕುಮಾರ ಕುಲಕರ್ಣಿ ಹಾಗೂ ಡಾ ಪ್ರಕಾಶಕುಮಾರ ರಾಠೋಡ್ ಅವರು ರೈತರಿಗೆ ಸುಧಾರಿತ ಮೇವಿನ ಬೆಳೆಗಳು, ಬಹು ವಾರ್ಷಿಕ ಹೈಬ್ರೀಡ್ ನೇಪಿಯರ್, ಗಿನಿ ಹುಲ್ಲು, ರೋಡ್ಸ್ ಹುಲ್ಲು, ಕುದುರೆ ಮೆಂತೆ, ದಶರಥ ಹುಲ್ಲು, ಸ್ಟೈಲೊ, ಚೊಗಚೆ, ಸುಪರ್ ನೇಪಿಯರ್, ಹೈನುಗಾರಿಕೆ ಘಟಕ, ಬಂಧನ ಮುಕ್ತ ಕೊಟ್ಟಿಗೆ, ದೇವಣಿ ತಳಿಗಳು ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ತರಬೇತಿಯಲ್ಲಿ ಔರಾದ್ ತಾಲ್ಲೂಕಿನ ನಾರಾಯಣಪುರ, ದುಡುಕುನಾಳ್, ಭಾಲ್ಕಿ ತಾಲ್ಲೂಕಿನ ಭಾತಂಬ್ರಾ, ನಿಡೇಬನ್, ಬಸವಕಲ್ಯಾಣ ತಾಲ್ಲೂಕಿನ ದೇವನಾಳ, ಮುಚಳಂಬ 130 ರೈತರು ಪಾಲ್ಗೊಂಡಿದ್ದರು. ಎಲ್ಲ ರೈತರಿಗೆ ತರಬೇತಿ ಪ್ರಮಾಣ ಪತ್ರ ನೀಡಲಾಯಿತು.
ಮುಖ್ಯ ಪಶು ವೈದ್ಯಾಧಿಕಾರಿ ಡಾ.ಗೌತಮ ಅರಳಿ, ಡಾ. ಓಂಕಾರ ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಶಿವಾನಂದ ಮಠಪತಿ, ರಾಮಚಂದ್ರ ಶೇರಿಕಾರ್, ಸಂಗಪ್ಪ ಅತಿವಾಳೆ, ಮಲ್ಲಿಕಾರ್ಜುನ, ಅರ್ಜುನ ಮಾಸಿಮಾಡೆ, ಮಲ್ಲಪ್ಪ ಗೌಡ, ಗುರುಪ್ರಸಾದ ಮೆಂಟೆ, ಪ್ರೇಮಸಾಗರ ಇದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.