ADVERTISEMENT

ಬಹಿರಂಗ ಚರ್ಚೆ: ಅನುಮತಿ ನಿರಾಕರಣೆ

ಮುಖಂಡರ ಸಂಧಾನಕ್ಕೆ ಯತ್ನಿಸುತ್ತಿರುವ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 15:46 IST
Last Updated 3 ನವೆಂಬರ್ 2020, 15:46 IST

ಬೀದರ್‌: ವಸತಿ ಯೋಜನೆಗಳ ಮನೆ ಹಂಚಿಕೆಯಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಸಂಸದ ಭಗವಂತ ಖೂಬಾ ಹಾಗೂ ಶಾಸಕ ಈಶ್ವರ ಖಂಡ್ರೆ ಅವರ ಬಹಿರಂಗ ಚರ್ಚೆಗೆ ಗಣೇಶ ಮೈದಾನ ಕೊಡಲು ನಗರಸಭೆ ನಿರಾಕರಿಸಿದೆ.

ಈಶ್ವರ ಖಂಡ್ರೆ ಅವರು ನಗರದ ಗಣೇಶ ಮೈದಾನದಲ್ಲಿ ಸಭೆ ನಡೆಸಲು ಅನುಮತಿ ಕೋರಿ ನಗರಸಭೆ ಆಯುಕ್ತ ರವೀಂದ್ರನಾಥ ಅಂಗಡಿ ಅವರಿಗೆ ಪತ್ರ ಕೊಟ್ಟಿದ್ದರು. ಕೋವಿಡ್‌ ಹರಡುವಿಕೆ ತಡೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟು ಕೊಂಡು ಬಹಿರಂಗ ಸಭೆ ನಡೆಸಲು ಮೈದಾನವನ್ನು ರಾಜಕೀಯ ಪಕ್ಷಗಳಿಗೆ ಕೊಡಬಹುದೆ ಎಂದು ಅಂಗಡಿ ಅವರು ಜಿಲ್ಲಾ ಪೊಲೀಸರ ಅಭಿಪ್ರಾಯ ಕೇಳಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಬಹಿರಂಗ ಸಭೆ ನಡೆಸಲು ಅವಕಾಶ ಕೊಡುವುದು ಒಳಿತಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಉತ್ತರಿಸಿದ್ದಾರೆ.

‘ಯಾವುದೇ ರಾಜಕೀಯ ಪಕ್ಷದ ಮುಖಂಡರು ಗಣೇಶ ಮೈದಾನದಲ್ಲಿ ಬಹಿರಂಗ ಸಭೆ ನಡೆಸುವ ಕುರಿತು ಜಿಲ್ಲಾ ಪೊಲೀಸರ ಅನುಮತಿ ಕೋರಿ ಅರ್ಜಿ ಸಲ್ಲಿಸಿಲ್ಲ. ಆದರೆ, ನಗರಸಭೆಯ ಆಯುಕ್ತರು ಪತ್ರ ಬರೆದು ಅಭಿಪ್ರಾಯ ಕೇಳಿದ್ದರು. ಅವರಿಗೆ ಸಮರ್ಪಕವಾದ ಉತ್ತರ ನೀಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ.

ADVERTISEMENT

‘ಬಹಿರಂಗ ಚರ್ಚೆಗೆ ನಗರಸಭೆ ಗಣೇಶ ಮೈದಾನ ನೀಡಿಲ್ಲ. ಮನೆ ಹಂಚಿಕೆಯಲ್ಲಿನ ಗೊಂದಲಗಳನ್ನು ನಿವಾರಿಸಿಕೊಳ್ಳಲು ಯಾವಾಗಲೂ ಕಾಂಗ್ರೆಸ್‌ ಬಾಗಿಲು ತೆರೆದುಕೊಂಡಿದೆ. ಅಂದು ಅಕ್ಕ ಮಹಾದೇವಿ ಕಾಲೇಜಿನ ಆವರಣದಿಂದ ಫಲಾನುಭವಿಗಳು ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿಕ್ಕೆ ಮನವಿ ಸಲ್ಲಿಸಲಿದ್ದಾರೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್‌ ಜಾಬಶೆಟ್ಟಿ ತಿಳಿಸಿದ್ದಾರೆ.

ಪ್ರತಿಕ್ರಿಯೆಗಾಗಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್‌ ಅವರ ಮೊಬೈಲ್‌ಗೆ ಅನೇಕ ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.