ADVERTISEMENT

ವಲಸೆ ಕಾರ್ಮಿಕರಿಗೆ ಆಹಾರಧಾನ್ಯ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 15:12 IST
Last Updated 11 ಜೂನ್ 2021, 15:12 IST
ಬೀದರ್ ತಾಲ್ಲೂಕಿನ ಕೊಳಾರ(ಕೆ) ಕೈಗಾರಿಕಾ ಪ್ರದೇಶದಲ್ಲಿ ವಲಸೆ ಕಾರ್ಮಿಕರಿಗೆ ಆಹಾರಧಾನ್ಯ ಕಿಟ್ ವಿತರಿಸಲಾಯಿತು
ಬೀದರ್ ತಾಲ್ಲೂಕಿನ ಕೊಳಾರ(ಕೆ) ಕೈಗಾರಿಕಾ ಪ್ರದೇಶದಲ್ಲಿ ವಲಸೆ ಕಾರ್ಮಿಕರಿಗೆ ಆಹಾರಧಾನ್ಯ ಕಿಟ್ ವಿತರಿಸಲಾಯಿತು   

ಬೀದರ್: ಪ್ರವರ್ಧ ಸ್ವಯಂ ಸೇವಾ ಸಂಸ್ಥೆಯು ಬೆಂಗಳೂರಿನ ಅಜೀಮ್ ಪ್ರೇಮ್‍ಜಿ ಫಿಲಾಂತ್ರಪಿಕ್ ಇನಿಷಿಯೇಟಿವ್ಸ್ ಹಾಗೂ ಆರ್ಬಿಟ್ ಸಂಸ್ಥೆ ಸಹಯೋಗದೊಂದಿಗೆ ಬೀದರ್ ತಾಲ್ಲೂಕಿನ ಕೊಳಾರ (ಕೆ) ಕೈಗಾರಿಕಾ ಪ್ರದೇಶದಲ್ಲಿ ಇರುವ ವಲಸೆ ಕಾರ್ಮಿಕರಿಗೆ ಆಹಾರಧಾನ್ಯ ಕಿಟ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಉಚಿತವಾಗಿ ವಿತರಿಸಿತು.

ಕೋವಿಡ್ ಪ್ರಯುಕ್ತ ವಿಧಿಸಲಾದ ಲಾಕ್‍ಡೌನ್ ಕಾರಣ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವಾಗಲು ಆಹಾರಧಾನ್ಯ ಕಿಟ್ ವಿತರಿಸಲಾಗಿದೆ ಎಂದು ಪ್ರವರ್ಧ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಕುದರೆ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯು ಪ್ರವರ್ಧ ಸಂಸ್ಥೆಯನ್ನು ಬೀದರ್ ಜಿಲ್ಲೆಯ ಕೋವಿಡ್ ಲಸಿಕಾ ಅಭಿಯಾನದ ನೋಡಲ್ ಸ್ವಯಂ ಸೇವಾ ಸಂಸ್ಥೆಯನ್ನಾಗಿ ನೇಮಕ ಮಾಡಿದೆ. ಜಿಲ್ಲಾ ಪಂಚಾಯಿತಿ ಸಹಕಾರದೊಂದಿಗೆ ಸಂಸ್ಥೆಯಿಂದ ಜಿಲ್ಲೆಯಲ್ಲಿ ಲಸಿಕೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಕೋವಿಡ್ ಸೋಂಕಿನಿಂದ ರಕ್ಷಣೆಗೆ ಲಸಿಕೆ ಪಡೆಯುವುದು ಅತ್ಯಂತ ಅವಶ್ಯಕವಾಗಿದೆ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಅರ್ಹ ಎಲ್ಲರೂ ಲಸಿಕೆಯ ಎರಡೂ ಡೋಸ್‍ಗಳನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಮನವಿ ಮಾಡಿದರು.

ಕಾರ್ಮಿಕರು ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಕಾರ್ಮಿಕ ಕಲ್ಯಾಣ ಅಧಿಕಾರಿ ರಮೇಶ ಸುಂಬದ ಹೇಳಿದರು.

ಅಜೀಮ್ ಪ್ರೇಮ್‍ಜಿ ಫಿಲಾಂತ್ರಪಿಕ್ ಇನಿಷಿಯೇಟಿವ್ಸ್ ರಾಜ್ಯ ಸಂಯೋಜಕ ಅನಿಲಕುಮಾರ ಕೋಡಂಬಲ್, ಪ್ರವರ್ಧ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್, ಯೋಜನಾ ವ್ಯವಸ್ಥಾಪಕ ಸಂತೋಷ, ಕಲ್ಲಪ್ಪ, ಸಾಧನಾ, ಸತೀಶ್, ಜಗದೀಶ್, ಶ್ರೀದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.