ಬೀದರ್: ಕುಶಲಕರ್ಮಿಗಳು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದು ಬಿದರಿ ಕಲೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕೇಂದ್ರ ರಸ ಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿದರಿ ಕುಶಲಕರ್ಮಿಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಿ ಹಾಗೂ ಪದ್ಮಶ್ರೀ ಪುರಸ್ಕೃತ ಶಾ ರಶೀದ್ ಅಹ್ಮದ್ ಖಾದ್ರಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಬಿದರಿ ಕಲಾಕೃತಿಗಳಿಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ಕೆಲವರು ನಕಲಿ ಕಲಾಕೃತಿಗಳನ್ನು ತಯಾರಿಸಿ ವಾಮ ಮಾರ್ಗದ ಮೂಲಕ ಗಣ ಗಳಿಸುತ್ತಿದ್ದಾರೆ. ಬಿದರಿ ಕುಶಲಕರ್ಮಿಗಳು ನೋಂದಣಿ ಮಾಡಿಕೊಂಡು ವ್ಯಾಪಾರು ವಹಿವಾಟು ನಡೆಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಡಿ. ಮೌದ್ಗಿಲ್ ಮಾತನಾಡಿ, ‘ಬಿದರಿ ಕಲೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಕುಶಲಕರ್ಮಿಗಳಿಗೆ ಹಾಗೂ ಯುವ ಪೀಳಿಗೆಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಹಾರೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಗರದಲ್ಲಿ ₹ 4 ಕೋಟಿ ವೆಚ್ಚದಲ್ಲಿ ತರಬೇತಿ ಕೇಂದ್ರ ನಿರ್ಮಿಸಲಾಗುವುದು’ ಎಂದು ತಿಳಿಸಿದರು.
‘ರಾಜ್ಯ ಸರ್ಕಾರ ₹ 1.5 ಕೋಟಿ ಮಂಜೂರು ಮಾಡಿದೆ. ಕೇಂದ್ರ ₹ 2.5 ಕೋಟಿ ಕೊಡಲಿದೆ’ ಎಂದು ಹೇಳಿದರು.
‘ಒಟ್ಟು 82 ಬಿದ್ರಿ ಕುಶಲಕರ್ಮಿಗಳಿಗೆ 22 ವರ್ಷಗಳ ಹಿಂದೆ ಮನೆಗಳ ಹಂಚಿಕೆ ಮಾಡಿ ಅವರಿಗೆ ಕಂತುಗಳಲ್ಲಿ ಹಣ ಕಟ್ಟಲು ತಿಳಿಸಲಾಗಿತ್ತು ಸುಮಾರು 38 ಜನರು ಹಣ ಪಾವತಿಸಿ ನೊಂದಣಿ ಮಾಡಿಕೊಂಡಿದ್ದರು. ಅವರಿಗೆ ಹಕ್ಕು ಪತ್ರ ಕೊಡಲಾಗುತ್ತಿದೆ. ಉಳಿದ 44 ಜನರಿಗೆ ನಂತರ ಹಕ್ಕುಪತ್ರ ವಿತರಿಸಲಾಗುವುದು’ ಎಂದು ತಿಳಿಸಿದರು.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ಶಾಸಕ ರಹೀಮ್ ಖಾನ್ ಮಾತನಾಡಿ, ಬಿದ್ರಿ ಕುಶಲಕರ್ಮಿಗಳು ಹೊಸ ವಿನ್ಯಾಸದ ಕಲಾಕೃತಿಗಳನ್ನು ರಚಿಸುವ ಮೂಲಕ ಕಲೆಯನ್ನು ಬೆಳೆಸಬೇಕು’ ಎಂದರು.
ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಚನ್ನಬಸವಣ್ಣ ಲಂಗೋಟಿ, ಹೆಚ್ಚುವರಿ ಜಿಲ್ಲಾದಿಕಾರಿ ಶಿವಕುಮಾರ ಶೀಲವಂತ, ಮುಖಂಡರಾದ ಗುರುನಾಥ ಕೊಳ್ಳೂರ, ಧಾರವಾಡ ಡಿಸಿ(ಹೆಚ್) ಸಹಾಯಕ ನಿರ್ದೇಶಕ ದರ್ಶನಾ ರಾಘವನ್, ನಿರ್ದೇಶಕ ಜಿ.ಎಸ್ ದಯಾನಂದ, ಡಿಐಸಿ ಜಂಟಿ ನಿರ್ದೇಶಕಿ ಸುರೇಖಾ ಮನೋಳಿ, ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ, ಪದ್ಮಶ್ರೀ ಪುರಷ್ಕೃತ ಶಾ ರಶೀದ್ ಅಹ್ಮದ್ ಖಾದ್ರಿ, ಬಿದ್ರಿ ಕುಶಲಕರ್ಮಿಗಳ ಸಂಘದ ಅಧ್ಯಕ್ಷ ಶಾಹಿನ್ ಪಟೇಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.