ಬೀದರ್: ತೀವ್ರ ವಿರೋಧದ ನಡುವೆಯೂ ಟಿಕೆಟ್ ಪಡೆದು ಗುರುವಾರ ತವರಿಗೆ ಬಂದಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಅವರ ಬೆಂಬಲಿಗರು ಸಂಭ್ರಮದಿಂದ ಸ್ವಾಗತಿಸಿದರು. ಆದರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಸ್ವಪಕ್ಷೀಯ ಶಾಸಕರು ಹಾಗೂ ಪ್ರಮುಖ ಮುಖಂಡರು ಅತ್ತ ಸುಳಿಯಲಿಲ್ಲ.
ಖೂಬಾ ಅವರಿಗೆ ಟಿಕೆಟ್ ಕೊಡುವುದಕ್ಕೆ ಆರಂಭದಿಂದಲೂ ಔರಾದ್ ಶಾಸಕ ಪ್ರಭು ಚವಾಣ್, ಬಸವಕಲ್ಯಾಣ ಶಾಸಕ ಶರಣು ಸಲಗರ, ಮಾಜಿ ಶಾಸಕ ಸುಭಾಷ ಕಲ್ಲೂರ ವಿರೋಧಿಸುತ್ತ ಬಂದಿದ್ದರು. ಪಕ್ಷದ ಬಹಿರಂಗ ಸಭೆಯಲ್ಲೂ ವಿರೋಧಿಸಿದ್ದರು. ಬಿಜೆಪಿ ವರಿಷ್ಠರ ಮಧ್ಯ ಪ್ರವೇಶದ ನಂತರ ರಾಗ ಬದಲಿಸಿದ್ದರು. ‘ಖೂಬಾ ಸೇರಿದಂತೆ ಯಾರಿಗೆ ಟಿಕೆಟ್ ಸಿಕ್ಕರೂ ಅವರ ಪರ ಚುನಾವಣೆಯಲ್ಲಿ ಕೆಲಸ ಮಾಡುತ್ತೇವೆ’ ಎಂದು ಹೇಳಿದ್ದರು.
ಆದರೆ, ಗುರುವಾರ ಖೂಬಾ ಅವರನ್ನು ಕಾಣಲು ಶಾಸಕರು, ಟಿಕೆಟ್ ಆಕಾಂಕ್ಷಿಗಳಾಗಿದ್ದವರು, ಸ್ಥಳೀಯ ಪ್ರಮುಖ ಮುಖಂಡರು ಬರಲಿಲ್ಲ. ಔರಾದ್ನಲ್ಲಿ ಅಮರೇಶ್ವರ ದೇವಸ್ಥಾನಕ್ಕೆ ಖೂಬಾ ತೆರಳಿ ದೇವರ ದರ್ಶನ ಪಡೆದರು. ಸ್ಥಳೀಯ ಶಾಸಕ ಪ್ರಭು ಚವಾಣ್ ಅಲ್ಲಿಗೂ ಸುಳಿಯಲಿಲ್ಲ. ಅವರ ಆಪ್ತರನ್ನು ಸಂಪರ್ಕಿಸಿದಾಗ, ಕೆಲಸದ ನಿಮಿತ್ತ ಮುಂಬೈಗೆ ತೆರಳಿದ್ದಾರೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಟಿಕೆಟ್ ಗೊಂದಲ ಬಗೆಹರಿದಿದ್ದರೂ ಭಗವಂತ ಖೂಬಾ ವಿರುದ್ಧದ ಬಿಜೆಪಿಯೊಳಗಿನ ಮುನಿಸು ಇನ್ನೂ ತಣಿದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.