ಬಸವಕಲ್ಯಾಣ: ‘ಕೋವಿಡ್ ಸೋಂಕಿತರನ್ನು ಸರ್ಕಾರಿ ಆಸ್ಪತ್ರೆಯಲ್ಲಿನ ವಾರ್ಡ್ನಲ್ಲಿಯೇ ಚಿಕಿತ್ಸೆ ನೀಡಬೇಕು. ಖಾಸಗಿ ಆಸ್ಪತ್ರೆಗೆ ಕಳಹಿಸುವುದು ಬೇಡ. ಹೀಗಾದರೆ ಬಡವರ ಜೇಬಿಗೆ ಕತ್ತರಿ ಬೀಳುತ್ತದೆ’ ಎಂದು ಸಂಸದ ಭಗವಂತ ಖೂಬಾ ವೈದ್ಯರಿಗೆ ಸಲಹೆ ನೀಡಿದ್ದಾರೆ.
ಅವರು ಭಾನುವಾರ ನಗರದಲ್ಲಿನ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಸೋಂಕಿತರೊಂದಿಗೆ ವ್ಯವಸ್ಥೆಯ ಬಗ್ಗೆ ಚರ್ಚಿಸಿದರು.
‘ಸೋಂಕಿತರನ್ನು ಸರಿಯಾಗಿ ನೋಡಿಕೊಳ್ಳಬೇಕು. ಚಿಕಿತ್ಸೆಯಲ್ಲಿ ಲೋಪ ಆಗಕೂಡದು. ಆಕ್ಸಿಜನ್, ಮಾತ್ರೆ, ಇಂಜಕ್ಷನ್ ಕೊರತೆ ಆಗಬಾರದು. ಅಲ್ಲದೆ ಆಸ್ಪತ್ರೆಯಲ್ಲಿನ ಕೋವಿಡ್ ವಾರ್ಡ್ನಲ್ಲಿನ ಹಾಸಿಗೆ ವ್ಯವಸ್ಥೆ, ಖಾಲಿ ಹಾಸಿಗೆಗಳ ವಿವರ, ಆಕ್ಸಿಜನ್ ಹಾಗೂ ಇತರೆ ವ್ಯವಸ್ಥೆಯ ವಿವರವನ್ನು ವಾರ್ಡ್ ಎದುರಿನ ಫಲಕದಲ್ಲಿ ಪ್ರತಿದಿನ ಬರೆಯಬೇಕು. ಹೀಗಾದರೆ ಜನರಲ್ಲಿ ಆಸ್ಪತ್ರೆಯ ಬಗ್ಗೆ ಭರವಸೆ ಮೂಡುತ್ತದೆ’ ಎಂದು ಹೇಳಿದರು.
‘ಆರೋಗ್ಯ ಕಾರ್ಯಕರ್ತರು ತಾಲ್ಲೂಕಿನ ಎಲ್ಲೆಡೆ ಕೋವಿಡ್ ಲಸಿಕೆ ಹಾಕಿಸಬೇಕು. ಕೋವಿಡ್ ಹಾಗೂ ಲಸಿಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಏನಾದರೂ ಲೋಪಗಳಿದ್ದರೆ ಸುಧಾರಿಸಿಕೊಳ್ಳಬೇಕು. ಸಮಸ್ಯೆ ಇದರೆ ನನಗೂ ಮೊಬೈಲ್ ಮೂಲಕ ಸಂಪರ್ಕಿಸಿ ಸಹಾಯ ಪಡೆಯಿರಿ’ ಎಂದು ಅಭಯ ನೀಡಿದರು.
‘ಸೋಂಕಿತರು ಕೂಡ ಧೈರ್ಯ ಕಳೆದುಕೊಳ್ಳಬಾರದು. ಖಾಸಗಿ ಆಸ್ಪತ್ರೆಗಿಂತ ಉತ್ತಮ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ದೊರಕುತ್ತದೆ’ ಎಂದು ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರವೀಣ ಹೂಗಾರ, ವೈದ್ಯ ಡಾ.ಗಿರಿಧರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.