ಬೀದರ್: ವಾಹನಗಳಿಗೆ ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಸಬೇಕೆಂದು ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ವಾಹನಗಳ ಚಾಲಕರು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಸಾರಿಗೆ ಆಯುಕ್ತ ಯೋಗೇಶ್ವರ ಅವರ ಹೆಸರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.
ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಸಲು ಆರ್ಟಿಒ ಕಚೇರಿಗಳಲ್ಲಿ ₹18,700 ಶುಲ್ಕ ಪಡೆಯುತ್ತಿದ್ದಾರೆ. ಬಾಡಿಗೆ ವಾಹನದಲ್ಲಿ ಯಾರಾದರೂ ಪ್ಯಾನಿಕ್ ಬಟನ್ ಒತ್ತಿದರೆ ಅದಕ್ಕೆ ದಂಡ ಕೂಡ ಇದೆ. ಪ್ರತಿ ವರ್ಷ ಇದಕ್ಕೆ ಶುಲ್ಕ ಸಹ ಭರಿಸಬೇಕು. ಇದು ಬಡ ಚಾಲಕರಿಗೆ ಹೊರೆಯಾಗಿದೆ. ಇದೇ ವೇಳೆ ಈ ವ್ಯವಸ್ಥೆ ಸರ್ಕಾರಿ ವಾಹನಗಳಿಗೆ ಅನ್ವಯಿಸಲ್ಲ. ಒಬ್ಬೊಬ್ಬರಿಗೆ ಒಂದೊಂದು ನಿಯಮ ರೂಪಿಸಿದರೆ ಹೇಗೆ? ಆರ್ಟಿಒ ಕಚೇರಿಗಳಲ್ಲಿ ಬ್ರೋಕರ್ಗಳ ಹಾವಳಿ ಹೆಚ್ಚಾಗಿದ್ದು, ಅದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹೂವಪ್ಪ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.