ಬೀದರ್: ‘ಗುಣಮಟ್ಟದ ಉತ್ತಮ ಶಿಕ್ಷಣ ಶ್ರೀಮಂತರಿಗೆ ಸೀಮಿತ ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿರುವುದು ಕಳವಳಕಾರಿ’ ಎಂದು ವಚನ ಸೌಹಾರ್ದ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪ್ರಕಾಶ ಗಂದಿಗುಡಿ ಅಭಿಪ್ರಾಯ ಪಟ್ಟರು.
ಇಲ್ಲಿನ ವಿದ್ಯಾನಗರದ ಬಸವಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಾಸಿಕ ಶರಣ ಸಂಗಮ ಹಾಗೂ ಶಿಕ್ಷಕ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣದ ವ್ಯಾಪಾರೀಕರಣದಿಂದ ನೈಜ ವಿದ್ಯೆ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಶಿಕ್ಷಣದ ನಿಜವಾದ ಉದ್ದೇಶ ಈಡೇರುತ್ತಿಲ್ಲ. 12ನೇ ಶತಮಾನದಲ್ಲಿ ಅನೇಕ ಅನ್ಯ ಭಾಷಿಕರು ಕಲ್ಯಾಣಕ್ಕೆ ಬಂದು ಕನ್ನಡ ಕಲಿತು ವಚನಗಳು ರಚಿಸಿದ್ದರು. ಆಗ ಎಂತಹ ವ್ಯವಸ್ಥೆ ಇದ್ದಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಬಹುದು ಎಂದು ತಿಳಿಸಿದರು.
ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಉದ್ಘಾಟಿಸಿ, ನಾವೆಲ್ಲ ಎಚ್ಚರಗೊಳ್ಳದಿದ್ದರೆ ಕನ್ನಡ ಉಳಿಯುವುದಿಲ್ಲ. ಕನ್ನಡ ಶಾಲೆಗಳ ದುಃಸ್ಥಿತಿ ಹೇಳತೀರದಾಗಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ, ರಾಜೇಂದ್ರಕುಮಾರ ಗಂದಗೆ, ಜೈರಾಜ ಖಂಡ್ರೆ, ಉಷಾ ಮಿರ್ಚೆ, ವೀರಭದ್ರಪ್ಪ ಭುಯ್ಯಾ, ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆ ವಿದ್ಯಾವತಿ ಬಸವರಾಜ ಬಲ್ಲೂರ ಇದ್ದರು.
ವಿರೂಪಾಕ್ಷ ದೇವರು ವಚನ ಪ್ರಾರ್ಥನೆ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಸ್ವಾಗತಿಸಿದರೆ, ಶಿವಶಂಕರ ಟೋಕರೆ ನಿರೂಪಿಸಿದರು. ಉಮೇಶ ಪಾಟೀಲ ವಂದಿಸಿದರು. ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.