ಬೀದರ್: ರೈತರು ಪ್ರತಿ ಟನ್ ಕಬ್ಬಿಗೆ 2,200 ಕ್ಕೂ ಅಧಿಕ ಬೆಲೆ ಹಾಗೂ 15 ದಿನಗಳ ಒಳಗೆ ಬಿಲ್ ಪಾವತಿಯ ಬೇಡಿಕೆ ಮಂಡಿಸಿದ ನಂತರವೇ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಬೇಕು. ಇಲ್ಲವಾದಲ್ಲಿ ಹೆಚ್ಚು ಬೆಲೆ ಕೊಡುವ ಕಾರ್ಖಾನೆಗಳಿಗೆ ಕಬ್ಬು ಪೂರೈಸುವ ಸಂಪೂರ್ಣ ಹಕ್ಕು ರೈತರಿಗೆ ಇದೆ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳನ್ನು ಉಳಿಸಿ ಎನ್ನುವ ಮಾತುಗಳು ಕಾರ್ಖಾನೆಗಳ ಆಡಳಿತ ಮಂಡಳಿಗಳಿಂದ ಕೇಳಿ ಬರುತ್ತಿವೆ. ಆದರೆ, ಕಾರ್ಖಾನೆಗಳು ಜಿಲ್ಲೆಯ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಮುಂದಾಗದಿರುವುದು ದುರದೃಷ್ಟಕರ ಎಂದಿದ್ದಾರೆ.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರತಿ ವರ್ಷ ಶೇ 8.78 ರಿಂದ ಶೇ 9 ರಷ್ಟು ಇಳುವರಿ ತೋರಿಸುತ್ತಿವೆ. ಆದರೆ, ನೆರೆಯ ಮಹಾರಾಷ್ಟ್ರದ ಲಾತೂರಿನ ಸಕ್ಕರೆ ಕಾರ್ಖಾನೆಗಳ ಇಳುವರಿ ಶೇ 12.02 ರಷ್ಟು ಇದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ಅಷ್ಟು ಇಳುವರಿ ಏಕೆ ಬರುತ್ತಿಲ್ಲ. ಇದು, ರೈತರಿಗೆ ಮಾಡುತ್ತಿರುವ ಪರೋಕ್ಷ ಮೋಸವಾಗಿದೆ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿನ ಬೆಲೆ 2,200 ಕ್ಕೂ ಹೆಚ್ಚಿದೆ. ಆದರೆ, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕೇವಲ 1,800 ಪಾವತಿಸುತ್ತಿವೆ. ಅದು ಸಹ ಒಂದೇ ಸಲ ಕೊಡುತ್ತಿಲ್ಲ. ರೈತರು ಹತ್ತಾರು ಬಾರಿ ಅಲೆದಾಡಿದಾಗ ವರ್ಷಗಟ್ಟಲೇ ಅವಧಿಯಲ್ಲಿ ಪಾವತಿಸುತ್ತಿವೆ. ಇನ್ನು ಕೆಲವರು ಅಷ್ಟನ್ನೂ ಸಂದಾಯ ಮಾಡುವುದಿಲ್ಲ ಎಂದು ದೂರಿದ್ದಾರೆ.
ಸಕ್ಕರೆ ಕಾರ್ಖಾನೆ ಉಳಿಸಿ ಎನ್ನುವ ಮುನ್ನ ರೈತನನ್ನು ಉಳಿಸಬೇಕು. ರೈತನಿಗೆ ಉತ್ತಮ ಬೆಲೆ ಕೊಟ್ಟು ನ್ಯಾಯ ಒದಗಿಸುವ ಕೆಲಸ ಆಗಬೇಕು. ಮೊದಲು ರೈತ, ನಂತರ ಕಾರ್ಖಾನೆಗಳು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.